ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಡಿಕೆಶಿ–ವಿಜಯೇಂದ್ರ ವಾಕ್ಸಮರ ತೀವ್ರ: “ನಾಲಿಗೆ ಬಿಗಿ ಹಿಡಿದು ಮಾತನಾಡಲಿ” – ವಿಜಯೇಂದ್ರ ಆಕ್ರೋಶ

On: December 18, 2025 10:23 PM
Follow Us:

ಬೆಳಗಾವಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ಮಾತಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ “ಖಜಾನೆ ಖಾಲಿಯಾಗಿದೆ, ಭ್ರಷ್ಟಾಚಾರ ಹೆಚ್ಚಾಗಿದೆ” ಎಂದು ವಿಜಯೇಂದ್ರ ಆರೋಪಿಸಿದ್ದಕ್ಕೆ ತಿರುಗೇಟು ನೀಡಿದ್ದ ಡಿಕೆಶಿ, “ಕಲೆಕ್ಷನ್ ಕಿಂಗ್ ಅಂದ್ರೆ ವಿಜಯೇಂದ್ರ” ಎಂದು ಹೇಳಿದ್ದರು. ಈ ಹೇಳಿಕೆಗೆ ಕೆರಳಿದ ವಿಜಯೇಂದ್ರ, ಡಿಕೆ ಶಿವಕುಮಾರ್ ವಿರುದ್ಧ ಗಟ್ಟಿ ಧ್ವನಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, “ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರದ ಮದ ಮಾತನಾಡಿಸುತ್ತಿದೆ. ಯಾರಿಗೋ ದಬ್ಬಾಳಿಕೆ ಮಾಡಿದಂತೆ ನನಗೆ ಮಾಡುವುದಕ್ಕೆ ಬರಬೇಡಿ. ನಾನು ತಪ್ಪಿಸಿಕೊಂಡು ಓಡಾಡುತ್ತಿಲ್ಲ. ವಿಪಕ್ಷದ ಪ್ರಶ್ನೆಗಳಿಗೆ ತಾಕತ್ತಿದ್ದರೆ ಸದನದಲ್ಲೇ ಉತ್ತರ ಕೊಡಿ” ಎಂದು ಸವಾಲು ಹಾಕಿದರು.

“ರಾಜ್ಯದ ಇತಿಹಾಸದಲ್ಲಿ ಭ್ರಷ್ಟಾಚಾರದ ಪಿತಾಮಹ ಯಾರು ಎಂದರೆ ಡಿ.ಕೆ.ಶಿವಕುಮಾರ್ ಎಂಬುದು ಎಲ್ಲರಿಗೂ ಗೊತ್ತು. ಕಾಂಗ್ರೆಸ್‌ನವರನ್ನೇ ಕೇಳಿದರೂ ಅವರೇ ಹೇಳುತ್ತಾರೆ. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಡಿಕೆಶಿಗೆ ಇಲ್ಲ” ಎಂದು ಕಿಡಿಕಾರಿದರು.

ನಾನು ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷ. ಅಂತಹ ಸ್ಥಾನದಲ್ಲಿರುವವರ ವಿರುದ್ಧ ಮನಬಂದಂತೆ ಮಾತನಾಡಬಾರದು. ಸಿದ್ದರಾಮಯ್ಯ ಸರ್ಕಾರಕ್ಕೆ ಅಧಿಕಾರಕ್ಕೆ ಬಂದು ಎರಡುವರೆ ವರ್ಷವಾದರೂ ಬೆಂಗಳೂರಿನಲ್ಲಿ ಒಂದು ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ. ಈ ಸರ್ಕಾರದ ಅಸಮರ್ಥತೆ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಖಾಲಿ ಹುದ್ದೆಗಳ ವಿಷಯ ಪ್ರಸ್ತಾಪಿಸಿದ ಅವರು, “ರಾಜ್ಯದಲ್ಲಿ 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿವೆ. ಸರ್ಕಾರ ಬಂದಿನಿಂದ ಒಂದನ್ನೂ ಭರ್ತಿ ಮಾಡಲು ಆಗಿಲ್ಲ. ಸಿಎಂ ತವರು ಜಿಲ್ಲೆಯಲ್ಲಿ 32 ಬಾರಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಚೈತ್ರ ಬಿ. ಅವರಿಗೆ ಕೇವಲ 5 ಲಕ್ಷ ರೂ. ಬಹುಮಾನ ನೀಡಿ ಅವಮಾನಿಸಲಾಗಿದೆ. ಸರ್ಕಾರದ ಮುಖಕ್ಕೆ ಆಕೆ ಹಣ ವಾಪಸ್ ಎಸೆದಿದ್ದಾಳೆ. ಖಜಾನೆ ಖಾಲಿಯಾಗಿರುವುದಕ್ಕೆ ಇದು ಸಾಕ್ಷಿ” ಎಂದರು.

ಡಿಕೆ ಶಿವಕುಮಾರ್ ಅವರು ‘ಕಲೆಕ್ಷನ್, ವರ್ಗಾವಣೆ ದಂಧೆ ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, “ತಾಕತ್ತು ಇದ್ದರೆ ಏನು ಬಿಚ್ಚಿಡಬೇಕೋ ಬಿಚ್ಚಿಡಲಿ. ನಾವು ಹೆದರಿಕೊಂಡಿಲ್ಲ” ಎಂದು ಬಹಿರಂಗ ಸವಾಲು ಹಾಕಿದರು.

ಇದುವರೆಗೂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮೃದುವಾಗಿ ವರ್ತಿಸುತ್ತಿದ್ದಾರೆ ಎಂಬ ಟೀಕೆಗಳನ್ನು ಎದುರಿಸುತ್ತಿದ್ದ ವಿಜಯೇಂದ್ರ, ಇದೇ ಮೊದಲ ಬಾರಿಗೆ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ಸ್ವರೂಪದ ವಾಗ್ದಾಳಿ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment