ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (VB-G RAM G) ಯೋಜನೆಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಡ್ಡಿಪಡಿಸುತ್ತಿರುವುದು ತೀವ್ರ ಖಂಡನೀಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್. ಅರುಣ್ ಹೇಳಿದ್ದಾರೆ. ಇದು ಕೇಂದ್ರ ಸರ್ಕಾರದ ಯೋಜನೆಗೆ ವಿರೋಧವಲ್ಲ, ರಾಜ್ಯದ ಬಡವರು, ರೈತರು ಹಾಗೂ ಗ್ರಾಮೀಣ ಶ್ರಮಿಕರ ಬದುಕಿನ ಮೇಲಿನ ನೇರ ದ್ರೋಹವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರೂ ರಾಜ್ಯದಲ್ಲಿ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯಗಳು ನಡೆಯದೆ ಇರುವುದಕ್ಕೆ ಹಣದ ಕೊರತೆಯೇ ಕಾರಣ ಎಂಬ ಕಾಂಗ್ರೆಸ್ ಸರ್ಕಾರದ ವಾದ ಸಂಪೂರ್ಣ ಸುಳ್ಳಾಗಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ನಡೆದಿರುವ ವ್ಯವಸ್ಥಿತ ಲೂಟಿ, ಆರ್ಥಿಕ ದುಶಾಸನ ಹಾಗೂ ರಾಜಕೀಯ ದುರ್ಬಳಕೆಯೇ ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಡಿ.ಎಸ್. ಅರುಣ್ ಆರೋಪಿಸಿದ್ದಾರೆ.
ಅಭಿವೃದ್ಧಿ ಶೂನ್ಯ ಆಡಳಿತ – ಲೂಟಿಯೇ ಕಾಂಗ್ರೆಸ್ ಮಂತ್ರ
ಬಡವರು ಮತ್ತು ಮಹಿಳೆಯರ ಹಿತ ಕಾಯುತ್ತೇವೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ, ವಾಸ್ತವದಲ್ಲಿ ತೆರಿಗೆದಾರರ ಹಣವನ್ನು ತನ್ನ ಹೈಕಮಾಂಡ್ ಓಲೈಕೆ ಹಾಗೂ ಇತರ ರಾಜ್ಯಗಳ ಚುನಾವಣಾ ಫಂಡಿಂಗ್ಗಾಗಿ ದುರ್ಬಳಕೆ ಮಾಡುತ್ತಿದೆ. ರಾಜ್ಯದ ಖಜಾನೆಯನ್ನು ಖಾಲಿ ಮಾಡಿದ ಬಳಿಕ, ಇದೀಗ ಕೇಂದ್ರದ ಜನಪರ ಯೋಜನೆಗಳಿಗೆ ತನ್ನ ಪಾಲಿನ 40% ಅನುದಾನ ನೀಡಲು ಸಾಧ್ಯವಿಲ್ಲ ಎಂದು ಹೇಳುವುದು ಕಾಂಗ್ರೆಸ್ ಆಡಳಿತದ ಅಸಮರ್ಥತೆಯ ಪ್ರತಿಬಿಂಬವಾಗಿದೆ. ಈ ಅನಗತ್ಯ ಲೂಟಿ ನಿಂತರೆ ರಾಜ್ಯದ ಪ್ರತಿಯೊಂದು ಗ್ರಾಮವೂ ಅಭಿವೃದ್ಧಿಯ ದಾರಿಯಲ್ಲಿ ಸಾಗಬಹುದು ಎಂದು ಅವರು ಹೇಳಿದ್ದಾರೆ.

VB-G RAM G: ಬಡವರ ಬದುಕಿಗೆ ಭದ್ರತೆ ನೀಡುವ ಯೋಜನೆ
VB-G RAM G ಯೋಜನೆ ಗ್ರಾಮೀಣ ಶ್ರಮಿಕರ ಬದುಕಿನಲ್ಲಿ ಮಹತ್ವದ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ. ನರೇಗಾದಲ್ಲಿ ಇದ್ದ 100 ದಿನಗಳ ಉದ್ಯೋಗವನ್ನು 125 ದಿನಗಳಿಗೆ ಹೆಚ್ಚಿಸುವ ಮೂಲಕ ಬಡ ಕುಟುಂಬಗಳ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕೃಷಿ ಕಟಾವಿನ ಅವಧಿಯಲ್ಲಿ 60 ದಿನಗಳ ಕಾಲ ಯೋಜನೆಯನ್ನು ಸ್ಥಗಿತಗೊಳಿಸುವ ವ್ಯವಸ್ಥೆ ರೈತರಿಗೆ ಕಾರ್ಮಿಕರ ಕೊರತೆ ತಪ್ಪಿಸುವ ಜನಪರ ನಿರ್ಧಾರವಾಗಿದೆ.
ಭ್ರಷ್ಟಾಚಾರಕ್ಕೆ ಬಯೋಮೆಟ್ರಿಕ್ ಬ್ರೇಕ್
100% ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಿಂದ ಬೋಗಸ್ ಕಾರ್ಡ್, ನಕಲಿ ಕಾರ್ಮಿಕರು ಹಾಗೂ ಮಧ್ಯವರ್ತಿಗಳ ದಂಧೆಗೆ ಸಂಪೂರ್ಣ ಕಡಿವಾಣ ಬೀಳಲಿದೆ. ಕೂಲಿ ಹಣ ನೇರವಾಗಿ ಶ್ರಮಿಕರ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ ಪಾರದರ್ಶಕತೆ ಖಚಿತವಾಗುತ್ತದೆ. ತಿಂಗಳುಗಟ್ಟಲೆ ಕೂಲಿಗಾಗಿ ಕಾಯಬೇಕಾದ ಅವಸ್ಥೆಗೆ ಅಂತ್ಯ ಹಾಡಲಾಗಿದೆ.

ಶಾಶ್ವತ ಆಸ್ತಿ ಸೃಷ್ಟಿಗೆ ಆದ್ಯತೆ
ಗುಂಡಿ ತೋಡಿ ಮುಚ್ಚುವ ಹಳೆಯ ಪದ್ಧತಿಗೆ ತೆರೆ ಎಳೆದು, ಹಳ್ಳಿಗಳಲ್ಲಿ ಶಾಶ್ವತ ಕೆರೆಗಳು, ಕಾಲುವೆಗಳು, ರಸ್ತೆ ಹಾಗೂ ಇತರ ಮೂಲಸೌಕರ್ಯಗಳ ನಿರ್ಮಾಣಕ್ಕೆ ಈ ಯೋಜನೆ ಆದ್ಯತೆ ನೀಡುತ್ತದೆ. ಇದರಿಂದ ಗ್ರಾಮೀಣ ಆರ್ಥಿಕತೆಗೆ ದೀರ್ಘಕಾಲಿಕ ಬಲ ದೊರೆಯಲಿದೆ.
ಕೌಶಲ್ಯಾಧಾರಿತ ಸಬಲೀಕರಣ – ಸ್ವಾವಲಂಬನೆಗೆ ದಾರಿ
ಈ ಯೋಜನೆ ಕೇವಲ ಕೂಲಿ ಕೆಲಸಕ್ಕೆ ಸೀಮಿತವಲ್ಲ. ಯುವಕರು ಮತ್ತು ಮಹಿಳೆಯರಿಗೆ ವೃತ್ತಿಪರ ತರಬೇತಿ ನೀಡಿ ಸ್ವಂತ ಉದ್ಯೋಗ ಆರಂಭಿಸಲು ಪ್ರೇರಣೆ ನೀಡಲಾಗುತ್ತದೆ. ಬಡವರನ್ನು ಕೇವಲ ಕಾರ್ಮಿಕರಾಗಿ ಅಲ್ಲ, ಸ್ವಾವಲಂಬಿ ಉದ್ಯಮಿಗಳಾಗಿ ರೂಪಿಸುವ ದೂರದೃಷ್ಟಿಯ ಯೋಜನೆಯಿದು.

ಗಾಂಧೀಜಿ ಆಶಯಗಳ ನಿಜವಾದ ಅನುಷ್ಠಾನ
MGREGA ಯೋಜನೆಯನ್ನು ಉನ್ನತೀಕರಿಸಿ ಹೊಸ ರೂಪ ನೀಡಿದಾಗ ಗಾಂಧೀಜಿ ಹೆಸರನ್ನು ಬದಲಿಸಲಾಗಿದೆ ಎಂದು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ಆದರೆ ಗಾಂಧೀಜಿ ಬಯಸಿದ್ದು ಹೆಸರು ಅಲ್ಲ, ಪಾರದರ್ಶಕತೆ ಮತ್ತು ಭ್ರಷ್ಟಾಚಾರ ಮುಕ್ತ ಗ್ರಾಮ ಸ್ವರಾಜ್ಯ. ಆ ಆಶಯಗಳನ್ನು ನರೇಂದ್ರ ಮೋದಿ ಸರ್ಕಾರ VB-G RAM G ಮೂಲಕ ನಿಜವಾಗಿ ಜಾರಿಗೆ ತರುತ್ತಿದೆ.
ರಾಜಕೀಯ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಲಿ
ಕಾಂಗ್ರೆಸ್ ಲೂಟಿಯಿಂದ ರಾಜ್ಯದ ಖಜಾನೆ ಖಾಲಿಯಾಗುತ್ತಿದೆ. ಆದರೆ ಮೋದಿ ಸರ್ಕಾರದ VB-G RAM G ಯೋಜನೆಯಿಂದ ಬಡವರ ಜೇಬು ತುಂಬಲಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರ ರಾಜಕೀಯ ದ್ವೇಷ ಬಿಟ್ಟು ಕೂಡಲೇ ಈ ಯೋಜನೆಗೆ ತನ್ನ ಪಾಲಿನ ಅನುದಾನ ನೀಡಬೇಕು ಮತ್ತು ‘ವಿಕಸಿತ ಭಾರತ’ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಡಿ.ಎಸ್. ಅರುಣ್ ಆಗ್ರಹಿಸಿದ್ದಾರೆ.







