ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧೀನದಲ್ಲಿರುವ ಎಲ್ಲಾ ಐದು ಪಾಲಿಕೆಗಳಿಗೆ 2026ರ ಜೂನ್ 30ರೊಳಗೆ ಚುನಾವಣಾ ಪ್ರಕ್ರಿಯೆ ಸಂಪೂರ್ಣಗೊಳಿಸಲೇಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ಹಾಗೂ ಕಠಿಣ ನಿರ್ದೇಶನ ನೀಡಿದೆ. ಯಾವುದೇ ಕಾರಣಕ್ಕೂ ಅಥವಾ ಪರಿಸ್ಥಿತಿಯಲ್ಲೂ ಚುನಾವಣೆಯನ್ನು ಮುಂದೂಡುವ ಅವಕಾಶ ಇಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠ ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿಗೆ ಚುನಾವಣೆ ನಡೆಸುವ ವಿಚಾರದಲ್ಲಿ ಇನ್ನು ಮುಂದೆ ಯಾವುದೇ ಕಾಲಾವಕಾಶ ವಿಸ್ತರಣೆಗೆ ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ.

ಫೆಬ್ರವರಿ 20ರೊಳಗೆ ವಾರ್ಡುಗಳ ಅಂತಿಮ ಮೀಸಲಾತಿ ಪಟ್ಟಿ
ಚುನಾವಣೆ ಪ್ರಕ್ರಿಯೆಗೆ ಅಗತ್ಯವಾದ ಪ್ರಮುಖ ಹಂತವಾದ ವಾರ್ಡುವಾರು ಅಂತಿಮ ಮೀಸಲಾತಿ ಪಟ್ಟಿಯನ್ನು 2026ರ ಫೆಬ್ರವರಿ 20ರೊಳಗೆ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತು ರಾಜ್ಯ ಸರ್ಕಾರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದ್ದು, ಇನ್ನೊಂದು ತಿಂಗಳೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಮತದಾರರ ಪಟ್ಟಿ, ವೇಳಾಪಟ್ಟಿ ಘೋಷಣೆ
ರಾಜ್ಯ ಚುನಾವಣಾ ಆಯೋಗವು ಸುಪ್ರೀಂಕೋರ್ಟ್ಗೆ ನೀಡಿದ ಮಾಹಿತಿಯಂತೆ, ಅಂತಿಮ ಮತದಾರರ ಪಟ್ಟಿಯನ್ನು 2026ರ ಮಾರ್ಚ್ 16ರೊಳಗೆ ಪ್ರಕಟಿಸಲಾಗುವುದು. ಚುನಾವಣಾ ಆಯೋಗವು ಮೇ ತಿಂಗಳ ಅಂತ್ಯದೊಳಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
ಮೇ 26 ನಂತರ ಚುನಾವಣೆ
ಶಾಲಾ ಹಾಗೂ ಕಾಲೇಜುಗಳ ಪರೀಕ್ಷೆಗಳ ಕಾರಣದಿಂದ ಚುನಾವಣಾ ಪ್ರಕ್ರಿಯೆಗೆ ಅಗತ್ಯವಿರುವ ಕಟ್ಟಡಗಳು ಲಭ್ಯವಾಗಲು ವಿಳಂಬವಾಗುತ್ತಿದೆ ಎಂದು ಚುನಾವಣಾ ಆಯೋಗ ನ್ಯಾಯಾಲಯಕ್ಕೆ ವಿವರಿಸಿದೆ. ಮೇ 26ರ ನಂತರ ಪರೀಕ್ಷೆಗಳು ಮುಗಿದ ತಕ್ಷಣವೇ ಚುನಾವಣೆಯನ್ನು ನಡೆಸಲಾಗುವುದು ಎಂದು ಆಯೋಗ ಭರವಸೆ ನೀಡಿದೆ.
ಇದನ್ನು ಪರಿಗಣಿಸಿದ ಸುಪ್ರೀಂಕೋರ್ಟ್, ಪರೀಕ್ಷೆಗಳು ಮುಗಿಯುತ್ತಿದ್ದಂತೆ ಯಾವುದೇ ತಡವಿಲ್ಲದೆ ಚುನಾವಣಾ ಪ್ರಕ್ರಿಯೆ ಆರಂಭಿಸಿ ಜೂನ್ 30, 2026ರೊಳಗೆ ಸಂಪೂರ್ಣ ಮುಗಿಸಲೇಬೇಕು ಎಂದು ಕಡ್ಡಾಯ ಆದೇಶ ನೀಡಿದೆ.
ನಾಲ್ಕು ವರ್ಷದ ಬಳಿಕ ಜನಪ್ರತಿನಿಧಿಗಳ ಆಡಳಿತ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೆ ಆಡಳಿತ ನಡೆಯುತ್ತಿದ್ದು, ಈ ಹಿನ್ನೆಲೆ ಸುಪ್ರೀಂಕೋರ್ಟ್ ಆದೇಶವನ್ನು ಬೆಂಗಳೂರಿನ ಆಡಳಿತಕ್ಕೆ ಮಹತ್ವದ ತಿರುವು ಎಂದು ವಿಶ್ಲೇಷಿಸಲಾಗುತ್ತಿದೆ. ಈ ಚುನಾವಣೆಯೊಂದಿಗೆ ಬೆಂಗಳೂರಿಗೆ ಮತ್ತೆ ಜನಪ್ರತಿನಿಧಿಗಳ ಆಡಳಿತ ಮರಳುವ ನಿರೀಕ್ಷೆ ಮೂಡಿದೆ.
ಒಟ್ಟಿನಲ್ಲಿ, ಜಿಬಿಎ ಅಧೀನದ ಎಲ್ಲ ಐದು ಪಾಲಿಕೆಗಳಿಗೆ ಈ ವರ್ಷದ ಜೂನ್ 30ರೊಳಗೆ ಚುನಾವಣೆ ನಡೆಯುವುದು ಖಚಿತವಾಗಿದ್ದು, ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗದ ಮೇಲೆ ಸುಪ್ರೀಂಕೋರ್ಟ್ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ.







