ಭಾಲ್ಕಿ, ಜನವರಿ 15: ಭಾಲ್ಕಿ ನಗರದ ಮಾಜಿ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಮಾಜಿ ಅಧ್ಯಕ್ಷರಾದ ಹಿರಿಯ ನಾಯಕ ಭೀಮಣ್ಣ ಖಂಡ್ರೆ ಅವರ ನಿವಾಸಕ್ಕೆ ಇಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳಾದ ಡಾ. ವೀರಸೋಮೇಶ್ವರ ಜಗದ್ಗುರುಗಳು ಗೌರವಪೂರ್ವಕವಾಗಿ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
102ನೇ ವಯಸ್ಸಿನಲ್ಲಿಯೂ ಚುರುಕಾಗಿ ಇರುವ ಭೀಮಣ್ಣ ಖಂಡ್ರೆ ಅವರ ಆರೋಗ್ಯದ ಕುರಿತು ಆತ್ಮೀಯವಾಗಿ ವಿಚಾರಿಸಿದ ಜಗದ್ಗುರುಗಳು, ಶೀಘ್ರವೇ ಸಂಪೂರ್ಣವಾಗಿ ಚೇತರಿಸಿಕೊಳ್ಳುವಂತೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಭೀಮಣ್ಣ ಖಂಡ್ರೆ ಅವರು ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅನನ್ಯ ಸೇವೆಯನ್ನು ಸ್ಮರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತ ಸಮುದಾಯದ ಏಳಿಗೆಗಾಗಿ ಭೀಮಣ್ಣ ಖಂಡ್ರೆ ಅವರು ಜೀವನಪೂರ್ತಿ ಶ್ರಮಿಸಿದ್ದು, ಅವರ ಅನುಭವ ಹಾಗೂ ಮಾರ್ಗದರ್ಶನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟರು. ಸಮಾಜದ ಏಕತೆ, ಮಾನವೀಯ ಮೌಲ್ಯಗಳು ಹಾಗೂ ಧರ್ಮಸಂರಕ್ಷಣೆಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯವೆಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಈಶ್ವರ ಖಂಡ್ರೆ ದಂಪತಿಗಳು, ಸಂಸದ ಸಾಗರ್ ಖಂಡ್ರೆ, ಮಹಾಕರ ರಾಜೇಶ್ವರ ಶಿವಾಚಾರ್ಯರು, ಹಲಬರ್ಗಾ ಹಾವಗಿ ಲಿಂಗೇಶ್ವರ ಶಿವಾಚಾರ್ಯರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಭೀಮಣ್ಣ ಖಂಡ್ರೆ ಅವರ ಆರೋಗ್ಯ ಸುಧಾರಣೆಗೆ ಹಾರೈಸಿದರು.
ಶ್ರೀ ರಂಭಾಪುರಿ ಜಗದ್ಗುರುಗಳ ಆತ್ಮೀಯ ಭೇಟಿ ಭೀಮಣ್ಣ ಖಂಡ್ರೆ ಕುಟುಂಬಕ್ಕೆ ಸಂತಸ ಮತ್ತು ಆತ್ಮಸ್ಥೈರ್ಯವನ್ನು ತುಂಬಿದ್ದು, ಈ ಕ್ಷಣವು ಉಪಸ್ಥಿತರಿದ್ದ ಎಲ್ಲರಲ್ಲೂ ಭಕ್ತಿಭಾವ ಹಾಗೂ ಗೌರವವನ್ನು ಮೂಡಿಸಿತು.







