ಚೆನ್ನೈ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು 2026ರ 4ನೇ ಚೆನ್ನೈ ಅಂತರಾಷ್ಟ್ರೀಯ ಪುಸ್ತಕ ಮೇಳ (CIBF) ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಸಾಹಿತ್ಯಾಸಕ್ತರು ಹಾಗೂ ಗಣ್ಯರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಮಿಳುನಾಡು ಶಾಲಾ ಶಿಕ್ಷಣ ಸಚಿವರಾದ ಡಾ. ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ನೀಡಿದ ಪ್ರೀತಿಯ ಆಹ್ವಾನ ಮತ್ತು ಆತ್ಮೀಯ ಆತಿಥ್ಯಕ್ಕೆ ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದ ಸಚಿವರು, ಇಂತಹ ಸಾಹಿತ್ಯಿಕ ವೇದಿಕೆಗಳು ರಾಜ್ಯಗಳ ನಡುವೆ ಸಾಂಸ್ಕೃತಿಕ ಸೇತುವೆಗಳನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಕೃತಿ ಮತ್ತು ಶಿಕ್ಷಣಕ್ಕೆ ಯಾವುದೇ ಗಡಿಗಳಿಲ್ಲ. ರಾಜ್ಯಗಳು ಹಾಗೂ ರಾಷ್ಟ್ರಗಳನ್ನು ಮೀರಿ ಸಾಹಿತ್ಯ ನಮ್ಮೆಲ್ಲರನ್ನೂ ಒಟ್ಟಿಗೆ ಬೆಸೆಯುವ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಭಾಷಾ ಪರಂಪರೆ ವಿಶ್ವಕ್ಕೆ ಮಾದರಿಯಾಗಿದ್ದು, ಅದನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸಲು ಎಲ್ಲರೂ ಸಂಯುಕ್ತವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ವಿಚಾರಗಳ ವಿನಿಮಯ, ಅಕ್ಷರ ಲೋಕದ ಶಕ್ತಿ ಹಾಗೂ ಪುಸ್ತಕ ಸಂಸ್ಕೃತಿಯ ಆಚರಣೆ ಇಂತಹ ಅಂತರಾಷ್ಟ್ರೀಯ ವೇದಿಕೆಗಳ ಮೂಲಕ ನಿರಂತರವಾಗಿ ಮುಂದುವರಿಯಬೇಕು. ಪುಸ್ತಕಗಳು ಮಾನವೀಯ ಮೌಲ್ಯಗಳನ್ನು ಬಲಪಡಿಸುವುದರ ಜೊತೆಗೆ, ಜ್ಞಾನ ವಿಸ್ತರಣೆಗೆ ದಾರಿಯಾಗುತ್ತವೆ ಎಂದು ಸಚಿವರು ಹೇಳಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ತಮಿಳುನಾಡು ಶಾಲಾ ಶಿಕ್ಷಣ ಸಚಿವರಾದ ಡಾ. ಅನ್ಬಿಲ್ ಮಹೇಶ್ ಪೊಯ್ಯಮೊಳಿ, ಸಂಸದರಾದ ಶ್ರೀಮತಿ ಕನಿಮೊಳಿ ಕರುಣಾನಿಧಿ, ಫ್ರಾಂಕ್ಫರ್ಟ್ ಪುಸ್ತಕ ಮೇಳದ ಉಪಾಧ್ಯಕ್ಷರಾದ ಕ್ಲೌಡಿಯಾ ಕೈಸರ್, ಫ್ರಾನ್ಸ್ನ ಕಾನ್ಸುಲ್ ಜನರಲ್ ಎಟಿಯೆನ್ ರೋಲ್ಯಾಂಡ್–ಪೀಗ್, ತಮಿಳುನಾಡು ಶಾಲಾ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಬಿ. ಚಂದ್ರಮೋಹನ್, ಕೇರಳ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವಾಸುಕಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಇತಿಹಾಸಕಾರರಾದ ಡಾ. ಎ.ಆರ್. ವೆಂಕಟಾಚಲಪತಿ, ಚೆನ್ನೈ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ಮನುಷ್ಯಪುತ್ತಿರನ್, ತಮಿಳುನಾಡು ಪಠ್ಯಪುಸ್ತಕ ಮತ್ತು ಶೈಕ್ಷಣಿಕ ಸೇವೆಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ. ಆರತಿ, ಸಾರ್ವಜನಿಕ ಗ್ರಂಥಾಲಯಗಳ ನಿರ್ದೇಶಕಿ ಎಸ್. ಜಯಂತಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.







