ದಾವಣಗೆರೆಯಲ್ಲಿ ಅಖಿಲ ಕರ್ನಾಟಕ NPS ನೌಕರರ ಸಂಘದ 2ನೇ ರಾಜ್ಯ ಕಾರ್ಯಕಾರಿಣಿ ಸಭೆ
ದಾವಣಗೆರೆ: ಅಖಿಲ ಕರ್ನಾಟಕ NPS ನೌಕರರ ಸಂಘ, ಬೆಂಗಳೂರು ಇವರ ವತಿಯಿಂದ 2ನೇ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ದಾವಣಗೆರೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ NPS ನೌಕರರ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಆಹ್ವಾನಿತ ಗಣ್ಯರು ಸಭೆಯಲ್ಲಿ ಭಾಗವಹಿಸಿ, ಹೊಸ ಪಿಂಚಣಿ ಯೋಜನೆ (NPS) ಯಿಂದ ಸರ್ಕಾರಿ ನೌಕರರು ಎದುರಿಸುತ್ತಿರುವ ಅನ್ಯಾಯ, ಆತಂಕ ಮತ್ತು ಭವಿಷ್ಯದ ಅಸ್ಥಿರತೆ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರು ಭಾಗವಹಿಸಿ, NPS ನೌಕರರ ಸಂಘದ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದರು. ಮಾತನಾಡಿದ ಅವರು, “ಸರ್ಕಾರಿ ನೌಕರರ ಜೀವನ ಭದ್ರತೆಯೇ ಆಡಳಿತ ವ್ಯವಸ್ಥೆಯ ಶಕ್ತಿ. NPS ಯೋಜನೆಯಿಂದ ನೌಕರರ ನಿವೃತ್ತಿ ಜೀವನ ಅಸುರಕ್ಷಿತವಾಗಿದ್ದು, ಹಳೆಯ ಪಿಂಚಣಿ ಯೋಜನೆ (OPS) ಪುನಃ ಜಾರಿಯಾಗಬೇಕೆಂಬುದು ನೌಕರರ ನ್ಯಾಯಸಮ್ಮತ ಬೇಡಿಕೆ. ಈ ಹೋರಾಟದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಸದಾ ನಿಮ್ಮೊಂದಿಗೆ ನಿಲ್ಲಲಿದೆ” ಎಂದು ಭರವಸೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ NPS ನೌಕರರ ಸಂಘದ ರಾಜ್ಯಾಧ್ಯಕ್ಷರಾದ ನಾಗನಗೌಡ ಎಂ.ಎ. ಅವರು ಮಾತನಾಡಿ, “NPS ವ್ಯವಸ್ಥೆ ನೌಕರರನ್ನು ಮಾರುಕಟ್ಟೆ ಆಧಾರಿತ ಅಪಾಯಕ್ಕೆ ಒಡ್ಡಿದೆ. ವರ್ಷಗಳ ಸೇವೆಯ ನಂತರವೂ ಖಚಿತ ಪಿಂಚಣಿ ಇಲ್ಲದಿರುವುದು ದೊಡ್ಡ ಅನ್ಯಾಯ. ಸಂಘಟಿತ ಹೋರಾಟದ ಮೂಲಕವೇ ಸರ್ಕಾರದ ಗಮನ ಸೆಳೆದು ನ್ಯಾಯ ಪಡೆಯಬೇಕು” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾದ ಎಸ್. ಬಸವರಾಜ, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ, ಗೌರವ ಸಲಹೆಗಾರರಾದ ಎಂ.ವಿ. ರುದ್ರಪ್ಪ, ಕಾರ್ಯಾಧ್ಯಕ್ಷರಾದ ಸದಾನಂದ, ದಾವಣಗೆರೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ವೀರೇಶ್ ಒಡೆಯನಪುರ, ದೆಹಲಿಯ ಪ್ರತಿನಿಧಿ ದೇವರಾಜ್ ಸೇರಿದಂತೆ ಅನೇಕ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅಂತರರಾಜ್ಯ ಮಟ್ಟದ ಬೆಂಬಲವನ್ನು ಸೂಚಿಸುವಂತೆ ತಮಿಳುನಾಡು ರಾಜ್ಯದ ಪ್ರತಿನಿಧಿಗಳಾದ ಸೆಲ್ವಕುಮಾರ್ ಹಾಗೂ ಪ್ರೇಡ್ರಿಕ್ ಏಂಜಲ್ ಅವರು ಭಾಗವಹಿಸಿ, NPS ವಿರುದ್ಧ ದೇಶವ್ಯಾಪಿ ಹೋರಾಟಕ್ಕೆ ಒಗ್ಗಟ್ಟಿನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಹೋರಾಟದ ರೂಪರೇಷು, ಸರ್ಕಾರದೊಂದಿಗೆ ಚರ್ಚೆ, ಪ್ರತಿಭಟನೆ, ಮನವಿ ಹಾಗೂ ಕಾನೂನು ಹೋರಾಟ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. NPS ನೌಕರರಿಗೆ ನ್ಯಾಯ ಸಿಗುವವರೆಗೂ ಹೋರಾಟವನ್ನು ನಿಲ್ಲಿಸಬಾರದು ಎಂಬ ಒಗ್ಗಟ್ಟಿನ ಸಂಕಲ್ಪವನ್ನು ಸಭೆ ವ್ಯಕ್ತಪಡಿಸಿತು.
ಒಟ್ಟಾರೆ, ದಾವಣಗೆರೆಯಲ್ಲಿ ನಡೆದ ಈ ರಾಜ್ಯ ಕಾರ್ಯಕಾರಿಣಿ ಸಭೆ NPS ನೌಕರರ ಹೋರಾಟಕ್ಕೆ ಹೊಸ ಉತ್ಸಾಹ, ಆತ್ಮವಿಶ್ವಾಸ ಹಾಗೂ ದಿಕ್ಕು ನೀಡಿದ್ದು, “ನ್ಯಾಯ ಖಂಡಿತ ಸಿಗುತ್ತದೆ” ಎಂಬ ಭರವಸೆಯ ಸಂದೇಶವನ್ನು ರಾಜ್ಯದಾದ್ಯಂತ ಕಳುಹಿಸಿತು.







