ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ನಾಡಿನ ಶಿಕ್ಷಣಕ್ಕೆ ಬಂಗಾರದ ಸ್ಪರ್ಶ: ಎಸ್. ಬಂಗಾರಪ್ಪ ಹಾದಿಯಲ್ಲಿ ಮಧು ಬಂಗಾರಪ್ಪ ಹೆಜ್ಜೆಗುರುತು

On: January 19, 2026 6:28 PM
Follow Us:

ಬೆಂಗಳೂರು: ಶಿಕ್ಷಣವೇ ಬಡವರ ಬದುಕನ್ನು ಬದಲಾಯಿಸುವ ಮಹಾಮಂತ್ರ ಎಂದು ದೃಢವಾಗಿ ನಂಬಿದ್ದವರು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ. ಮಕ್ಕಳಿಗೆ ಶಾಲೆಯೇ ಮೊದಲ ಆದ್ಯತೆ ಆಗಬೇಕು, ಅವರು ಅಪ್ಪ–ಅಮ್ಮರೊಂದಿಗೆ ಕೂಲಿ ಕೆಲಸಕ್ಕೆ ಹೋಗದೇ ಪಾಠಶಾಲೆಯ ಸಾಲಿಗುಡಿಗೆ ಬರಬೇಕು ಎಂಬ ಮಾನವೀಯ ಕಾಳಜಿಯಿಂದಲೇ ಅವರು ಶಾಲಾ ಹಾಜರಿಯ ಆಧಾರದಲ್ಲಿ ದಿನಕ್ಕೆ ಒಂದು ರೂಪಾಯಿ ಪ್ರೋತ್ಸಾಹಧನ ನೀಡುವ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದ್ದರು. ಕಲಿತು ಮನೆಗೆ ಮರಳುವ ಮಗು ಗಳಿಕೆಯೊಂದನ್ನು ಕೈಯಲ್ಲಿ ಹಿಡಿದು ಮನೆಯವರ ತುತ್ತಿಗೆ ತನ್ನ ಪಾಲನ್ನು ನೀಡುತ್ತಿದ್ದ ದಿನಗಳು ಸಮಾಜದ ಸ್ಮರಣೀಯ ಅಧ್ಯಾಯವಾಗಿವೆ.

ಇಂದು, ಸುಮಾರು ಮೂರು ದಶಕಗಳ ಬಳಿಕ, ಅದೇ ಬಂಗಾರದ ಹಾದಿಯಲ್ಲಿ ಅವರ ಪುತ್ರ ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಚುಕ್ಕಾಣಿ ಹಿಡಿದು ಸಾಗುತ್ತಿದ್ದಾರೆ. ಅಪ್ಪನ ಶಿಕ್ಷಣ ತತ್ವಗಳನ್ನು ಹೊಸ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಿಸುತ್ತಾ, ಶಿಕ್ಷಣವೇ ಸಮಾಜದ ದೀವಿಗೆ ಎಂಬ ಸಂದೇಶವನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ದೇವಸ್ಥಾನದ ಗಂಟೆಯ ಸದ್ದಿಗಿಂತ ಶಾಲೆಯ ಗಂಟೆಯ ಸದ್ದು ಸಮಾಜದಲ್ಲಿ ಹೆಚ್ಚು ಪರಿಣಾಮಕಾರಿಯೆಂಬ ನಂಬಿಕೆಯನ್ನು ಅವರು ಇಲಾಖೆಯ ಕಾರ್ಯಶೈಲಿಯ ಮೂಲಕ ಸಾಬೀತುಪಡಿಸುತ್ತಿದ್ದಾರೆ. ಜಾಗತಿಕ ಮಟ್ಟದ ಸ್ಪರ್ಧೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಅಬ್ಬರದ ನಡುವೆ ಮಂಕಾಗುತ್ತಿದ್ದ ಸರ್ಕಾರಿ ಶಾಲೆಗಳಿಗೆ ಪುನರ್ಜೀವ ನೀಡುವ ಗುರಿಯನ್ನು ನಿಶ್ಚಯಿಸಿ, ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕೈ ಹಾಕಿದ್ದಾರೆ.

ಸರ್ಕಾರಿ ಶಾಲೆಗಳು ಕೇವಲ ಸರ್ಕಾರದ ಸ್ವತ್ತಲ್ಲ, ಅವು ಸಮುದಾಯದ ಸ್ವತ್ತು ಎಂಬ ನಿಟ್ಟಿನಲ್ಲಿ ಜನರ ಸಹಭಾಗಿತ್ವದೊಂದಿಗೆ ಶಾಲೆಗಳ ಪುನರ್ ನಿರ್ಮಾಣ, ಅಭಿವೃದ್ಧಿ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಚಿಂತನೆಯ ಫಲವಾಗಿ, ಖಾಸಗಿ ಶಾಲೆಗಳಿಗೆ ಪರ್ಯಾಯವಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಕೆಪಿಎಸ್ (KPS) ಶಾಲೆಗಳ ಆರಂಭವು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳ ಮನೆಬಾಗಿಲಿಗೆ ಶಿಕ್ಷಣವನ್ನು ತಂದು ನಿಲ್ಲಿಸಿದೆ.

ಕೆಪಿಎಸ್ ಶಾಲೆಗಳಷ್ಟೇ ಅಲ್ಲದೆ, ವಿದ್ಯಾರ್ಥಿ ಸ್ನೇಹಿ ಸುಧಾರಣೆಗಳಾದ ‘ಮೂರು ಪರೀಕ್ಷಾ ಪದ್ಧತಿ’, ಪರೀಕ್ಷೆಗಳ ಪಾರದರ್ಶಕತೆಗೆ ‘ವೆಬ್‌ಕಾಸ್ಟಿಂಗ್’ ವ್ಯವಸ್ಥೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತೇರ್ಗಡೆಗೆ ಅಗತ್ಯವಾದ ಕನಿಷ್ಠ ಅಂಕಗಳನ್ನು ಶೇ. 35ರಿಂದ ಶೇ. 33ಕ್ಕೆ ಇಳಿಸಿರುವ ನಿರ್ಧಾರಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪವಾಗಿವೆ.

ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಬದ್ಧತೆಯೂ ಅವರ ಕಾರ್ಯಶೈಲಿಯ ಪ್ರಮುಖ ಅಂಶವಾಗಿದೆ.

ಶಾಲೆಗಳಿಗೆ ಕಟ್ಟಡ, ಸೌಲಭ್ಯಗಳು ಮುಖ್ಯವಾದಂತೆ, ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರ ಪಾತ್ರ ನಿರ್ಣಾಯಕ ಎಂಬುದನ್ನು ಅರಿತಿರುವ ಸಚಿವ ಮಧು ಬಂಗಾರಪ್ಪ, ಅಧಿಕಾರ ಸ್ವೀಕರಿಸಿದ ಎರಡೇ ವರ್ಷಗಳಲ್ಲಿ 35 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಕ್ರಮ ವಹಿಸಿ ಶಿಕ್ಷಣ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಿದ್ದಾರೆ. ಶಿಕ್ಷಕರನ್ನು ಕೇವಲ ಪಾಠ ಬೋಧಕರಾಗಿಯೇ ಅಲ್ಲ, ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳಾಗಿ ರೂಪಿಸಲು ನಿರಂತರ ತರಬೇತಿ, ಡಿಜಿಟಲ್ ತಂತ್ರಜ್ಞಾನಗಳ ಅಳವಡಿಕೆ, ದಶಕಗಳಿಂದ ಬಾಕಿ ಉಳಿದಿದ್ದ ಅವರ ಸಮಸ್ಯೆಗಳ ಪರಿಹಾರಕ್ಕೂ ಆದ್ಯತೆ ನೀಡಿದ್ದಾರೆ.

ಸದ್ದಿಲ್ಲದೇ ಆದರೆ ಪರಿಣಾಮಕಾರಿಯಾಗಿ ಶಿಕ್ಷಣ ಇಲಾಖೆಯಲ್ಲಿ ಬದಲಾವಣೆಯ ದಾಪುಗಾಲು ಇಡುತ್ತಿರುವ ಮಧು ಬಂಗಾರಪ್ಪ, ಲಕ್ಷಾಂತರ ಪೋಷಕರು, ಶಿಕ್ಷಣ ತಜ್ಞರು ಹಾಗೂ ಸಮಾಜದ ಎಲ್ಲ ವರ್ಗಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಈ ಹೆಜ್ಜೆಗುರುತುಗಳನ್ನು ಗುರುತಿಸಿ ಗೌರವಿಸುವ ಕಾರ್ಯವೂ ಸಮಾಜದಿಂದ ನಡೆಯುತ್ತಿದೆ.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ‘ಶಿಕ್ಷಣ ಬಂಗಾರ’ ಶ್ರೇಯ

ಶಿಕ್ಷಣ ಕ್ಷೇತ್ರದಲ್ಲಿ ಸಚಿವ ಮಧು ಬಂಗಾರಪ್ಪ ಅವರು ತಂದಿರುವ ಕ್ರಾಂತಿಕಾರ ಬದಲಾವಣೆಗಳು ಹಾಗೂ ಅವುಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ತೋರಿದ ಬದ್ಧತೆಯನ್ನು ಪರಿಗಣಿಸಿ, ಕರ್ನಾಟಕದ ಪ್ರತಿಷ್ಠಿತ ಸಂಘಟನೆಯಾದ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ಸ್ ಆಫ್ ಪ್ರೈಮರಿ ಮತ್ತು ಸೆಕೆಂಡರಿ ಸ್ಕೂಲ್ಸ್ ಇನ್ ಕರ್ನಾಟಕ (KAMS) ಬೆಂಗಳೂರು ನಗರದಲ್ಲಿ ಆಯೋಜಿಸಿದ್ದ ‘ವಿಷನ್ – ಮಿಷನ್’ (VISION – MISSION) ಶಿಕ್ಷಣ ಸಮ್ಮೇಳನದಲ್ಲಿ ಅವರಿಗೆ ‘ಶಿಕ್ಷಣ ಬಂಗಾರ’ – ಶಿಕ್ಷಣ ಇಲಾಖೆಯ ಬಂಗಾರದ ಮನುಷ್ಯ (Shikshana Bangara) ಎಂಬ ಗೌರವಯುತ ಬಿರುದನ್ನು ಪ್ರದಾನಿಸಿ ಸನ್ಮಾನಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ಮಾನ್ಯತೆ ನವೀಕರಣ (RR) ಪ್ರಕ್ರಿಯೆಯನ್ನು ಈಗಾಗಲೇ ಸರಳಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಿಯಮಗಳನ್ನು ಇನ್ನಷ್ಟು ಸುಗಮಗೊಳಿಸುವ ಮೂಲಕ ಇಲಾಖೆಯನ್ನು ಜನಸ್ನೇಹಿಯಾಗಿ ರೂಪಿಸುವ ಕಾರ್ಯ ನಿರಂತರವಾಗಿ ನಡೆಯಲಿದೆ ಎಂಬ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ್, ರಾಮೋಜಿ ಗೌಡ, ಭಾರತೀಯ ಶಿಕ್ಷಣ ಮಂಡಳಿಯ ಕಾರ್ಯನಿರತ ಅಧ್ಯಕ್ಷ ಎನ್.ಪಿ. ಸಿಂಗ್ ಹಾಗೂ KAMS ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

K.M.Sathish Gowda

Join WhatsApp

Join Now

Facebook

Join Now

Read more

‘ಕೊಟ್ಟ ಮಾತು ಉಳಿಯುತ್ತದೆಯೇ?’ – ಕಾಂಗ್ರೆಸ್ ಒಳಕಿಚ್ಚಿಗೆ ಸುರೇಶ್ ಮಾರ್ಮಿಕ ನುಡಿ, ಡಿಕೆಶಿ ದೆಹಲಿ ಪಯಣ ರಾಜಕೀಯ ಚರ್ಚೆ ತೀವ್ರ

“ಮೊದಲು ನಿಮ್ಮ ಹೈಕಮಾಂಡ್‌ ಹುಡುಕಿ, ಬಳಿಕ ಮೋದಿ ಬಗ್ಗೆ ಮಾತನಾಡಿ”: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಪ್ಲಾಸ್ಟಿಕ್ ಮುಕ್ತ ಶಿವರಾತ್ರಿ ಉತ್ಸವಕ್ಕೆ ಹರಕೆರೆ ಹರಕೇಶ್ವರ ದೇವಸ್ಥಾನದಲ್ಲಿ ಸಂಕಲ್ಪ

ಜನಸೇವೆಗೆ ಬದ್ಧ ನಾಯಕತ್ವ: ಹಾರನಹಳ್ಳಿಯಲ್ಲಿ ಡಿ.ಎಸ್. ಅರುಣ್ ಅವರಿಂದ ಪಂಚಾಯಿತಿ ಕಟ್ಟಡ ಉದ್ಘಾಟನೆ ಹಾಗೂ ಹಕ್ಕುಪತ್ರ ವಿತರಣೆ

‘ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು’: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ಖಡಕ್ ಸಂದೇಶ

ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ: ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Comment