ಬೆಂಗಳೂರು: ಇಂದಿನಿಂದ ಆರಂಭಗೊಂಡಿರುವ ರಾಜ್ಯ ವಿಧಾನಸಭೆ–ವಿಧಾನಪರಿಷತ್ ಜಂಟಿ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಹಾಜರಾಗಿ, ಸರ್ಕಾರ ಸಿದ್ಧಪಡಿಸಿದ್ದ ಭಾಷಣ ಓದಲು ನಿರಾಕರಿಸಿದ ಘಟನೆ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಸಂವಿಧಾನಬದ್ಧವಾಗಿ ಓದಬೇಕಾದ ಸಚಿವ ಸಂಪುಟದ ಭಾಷಣವನ್ನು ತಿರಸ್ಕರಿಸಿದ ರಾಜ್ಯಪಾಲರು, ಕೇವಲ ಎರಡು ಸಾಲಿನ ಹೇಳಿಕೆಯನ್ನು ನೀಡಿ ಅಧಿವೇಶನದಿಂದ ನಿರ್ಗಮಿಸಿದರು.
ವಿಧಾನಸೌಧದ ಕೇಂದ್ರ ಸಭಾಂಗಣದಲ್ಲಿ ಭಾಷಣ ಮಾಡಿದ ರಾಜ್ಯಪಾಲರು, “ನನ್ನ ಸರ್ಕಾರವು ರಾಜ್ಯದ ಆರ್ಥಿಕ, ಸಾಮಾಜಿಕ ಹಾಗೂ ಭೌತಿಕ ಅಭಿವೃದ್ಧಿಯನ್ನು ದ್ವಿಗುಣಗೊಳಿಸಲು ಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ” ಎಂದಷ್ಟೇ ಹೇಳಿ ಭಾಷಣವನ್ನು ಮುಗಿಸಿದರು.
ರಾಜ್ಯಪಾಲರು ಸಭಾಂಗಣದಿಂದ ಹೊರನಡೆದ ಕ್ಷಣದಲ್ಲೇ ಕಾಂಗ್ರೆಸ್ ಶಾಸಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಶಾಸಕರು ರಾಜ್ಯಪಾಲರ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯರಿಂದ ತೀವ್ರ ಖಂಡನೆ
ರಾಜ್ಯಪಾಲರ ನಿರ್ಗಮನದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,
“ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ. ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೆ, ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಇದು ಜನಪ್ರತಿನಿಧಿಗಳ ಸಭೆಗೆ ಮಾಡಿದ ಅಪಮಾನ”ಎಂದು ಕಿಡಿಕಾರಿದರು.
ಈ ವಿಷಯವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವ ಕುರಿತು ಸರ್ಕಾರ ಚರ್ಚೆ ನಡೆಸುತ್ತಿದೆ. ಜೊತೆಗೆ, ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ವಿವಾದಕ್ಕೆ ಕಾರಣವೇನು?
ಸಂವಿಧಾನ ನಿಯಮಗಳಂತೆ ಜಂಟಿ ಅಧಿವೇಶನದ ವೇಳೆ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದಬೇಕಾಗಿರುತ್ತದೆ. ಆದರೆ ಈ ಬಾರಿ ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ಕೇಂದ್ರ ಸರ್ಕಾರದ ಕೆಲವು ನೀತಿಗಳ ಕುರಿತು ಟೀಕೆಗಳು ಇದ್ದವು.
ಮನ್ರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಹೆಸರು ಬದಲಾವಣೆ
ಹೊಸದಾಗಿ ಜಾರಿಗೊಳಿಸಿರುವ ವಿಕಸಿತ ಭಾರತ – ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆಯ ವಿರೋಧ
ಈ ಅಂಶಗಳು ಭಾಷಣದಲ್ಲಿ ಸೇರಿದ್ದುದಕ್ಕೆ ರಾಜ್ಯಪಾಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕಳೆದ ಕೆಲವು ದಿನಗಳಿಂದ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವೆ ಈ ವಿಚಾರವಾಗಿ ಶೀತಲ ಸಮರ ನಡೆಯುತ್ತಿತ್ತು. ಅಂತಿಮವಾಗಿ ಭಿನ್ನಾಭಿಪ್ರಾಯ ಬಗೆಹರಿಯದೆ, ರಾಜ್ಯಪಾಲರು ಭಾಷಣ ಓದದೆ ಸಭೆಯಿಂದ ಹೊರ ಹೋಗುವ ನಿರ್ಧಾರ ಕೈಗೊಂಡರು.
ಸಂವಿಧಾನದ ವಿಧಿಗಳ ಉಲ್ಲಂಘನೆ ಆರೋಪ
ಸಿಎಂ ಸಿದ್ದರಾಮಯ್ಯ ಅವರ ಪ್ರಕಾರ, ಸಂವಿಧಾನದ ಕಲಂ 176 ಮತ್ತು 163 ರಂತೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದಲೇಬೇಕಾಗಿದೆ. ತಾವೇ ಸಿದ್ಧಪಡಿಸಿದ ಅಥವಾ ತಿದ್ದುಪಡಿ ಮಾಡಿದ ಭಾಷಣವನ್ನು ಓದುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ.
“ಸಂವಿಧಾನ ಜಾರಿಗೆ ಬಂದ ದಿನದಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ರಾಜ್ಯಪಾಲರು ಉಲ್ಲಂಘಿಸಿದ್ದಾರೆ. ಇದು ಸಂವಿಧಾನಬಾಹಿರ ನಡೆ” ಎಂದು ಸಿಎಂ ಹೇಳಿದರು.







