ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಭದ್ರಾವತಿ ತಹಶೀಲ್ದಾರ್ ವಿರುದ್ಧ ಮಾನಸಿಕ ಕಿರುಕುಳ ಆರೋಪ: ಡೆತ್ ನೋಟ್ ಬರೆದು ನದಿಗೆ ಹಾರಿದ ಸಿಬ್ಬಂದಿ, ಗ್ರಾಮಸ್ಥರಿಂದ ರಕ್ಷಣೆ

On: February 4, 2026 8:32 AM
Follow Us:

ಭದ್ರಾವತಿ: ಭದ್ರಾವತಿ ತಾಲ್ಲೂಕು ಕಚೇರಿಯ ಮಾನ್ಯ ತಹಶೀಲ್ದಾರ್ ಪರಸಪ್ಪ ಅವರಿಂದ ನಿರಂತರ ಮಾನಸಿಕ ಕಿರುಕುಳ ಎದುರಿಸುತ್ತಿದ್ದೇನೆ ಎಂದು ಆರೋಪಿಸಿ, ಸಿಬ್ಬಂದಿಯೊಬ್ಬರು ಡೆತ್ ನೋಟ್ ಬರೆದು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿ ನದಿಗೆ ಹಾರಿದ ಘಟನೆ ಮಂಗಳವಾರ ಭದ್ರಾವತಿ ತಾಲ್ಲೂಕಿನಲ್ಲಿ ಆತಂಕ ಮೂಡಿಸಿದೆ. ಅದೃಷ್ಟವಶಾತ್, ಸ್ಥಳೀಯ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಅವರ ಜೀವ ಉಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿ ಗ್ರಾಮದ ನಿವಾಸಿ ಆರ್.ಜಿ. ಅಭಿಷೇಕ್ (ಪುತ್ರ: ಆರ್.ಎಂ. ಗಂಗಾಧರಪ್ಪ) ಅವರು ಈ ಅತಿದೊಡ್ಡ ಹೆಜ್ಜೆಗೆ ಮುಂದಾಗಿದ್ದಾರೆ. ಭದ್ರಾವತಿ ತಾಲ್ಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭಿಷೇಕ್ ಅವರು, ತಹಶೀಲ್ದಾರ್ ಅವರಿಂದ ನಿರಂತರ ಒತ್ತಡ ಹಾಗೂ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಅಭಿಷೇಕ್ ಅವರು ಬರೆದಿರುವ ಡೆತ್ ನೋಟ್‌ನಲ್ಲಿ, 01-02-2026, 02-02-2026 ಮತ್ತು 03-02-2026 ರಂದು ಇ-ಪೌತಿ ಖಾತೆ ಪ್ರಕ್ರಿಯೆ ಹಾಗೂ ಆಗರದಹಳ್ಳಿ ಗ್ರಾಮದ ಸರ್ವೆ ನಂ. 56, 49 ಮತ್ತು 50ಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ತಮ್ಮ ಮೇಲೆ ಅತಿಯಾದ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಪಿಟಿಸಿಎಲ್ ಕಾಯ್ದೆಯಡಿ ತಡಸ ಸರ್ವೆ ನಂ. 51/ಬಿ ಕುರಿತ ಕಡತವನ್ನು ಈಗಾಗಲೇ ತಾಲ್ಲೂಕು ಕಚೇರಿಗೆ ಸಲ್ಲಿಸಿದ್ದರೂ ಕೂಡ ಪದೇಪದೇ ಅನಾವಶ್ಯಕ ತೊಂದರೆ ನೀಡಲಾಗುತ್ತಿದೆ ಎಂದು ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.

2005ರಿಂದ ಸರ್ಕಾರಿ ಸೇವೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಈವರೆಗೆ ಯಾವುದೇ ಲೋಪದೋಷಗಳಿಲ್ಲದೆ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಅಭಿಷೇಕ್ ಅವರು ತಮ್ಮ ನೋಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ತಾವು ಕುಟುಂಬದ ಏಕೈಕ ದುಡಿಯುವ ಸದಸ್ಯರಾಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಆರೈಕೆಯ ಸಂಪೂರ್ಣ ಜವಾಬ್ದಾರಿಯೂ ತಮ್ಮ ಮೇಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಎಲ್ಲಾ ವಾಸ್ತವಾಂಶಗಳನ್ನು ಅಧಿಕಾರಿಗಳಿಗೆ ತಿಳಿಸಿದರೂ ಕೂಡ ತಮ್ಮ ಮೇಲೆ ಮಾನಸಿಕ ಕಿರುಕುಳ ಮುಂದುವರಿದಿದೆ ಎಂದು ಅವರು ಆರೋಪಿಸಿದ್ದಾರೆ.

ಘಟನೆ ನಡೆದ ಸಂದರ್ಭದಲ್ಲಿ ವಿಷಯ ತಿಳಿದ ಸ್ಥಳೀಯ ಗ್ರಾಮಸ್ಥರಾದ ಆಗರದಹಳ್ಳಿ ನಾಗರಾಜಪ್ಪ ಹಾಗೂ ಇತರರು ತಕ್ಷಣ ಧಾವಿಸಿ, ನದಿಗೆ ಹಾರಿದ್ದ ಅಭಿಷೇಕ್ ಅವರನ್ನು ರಕ್ಷಣೆ ಮಾಡಿದ್ದಾರೆ. ನದಿಯ ಚಾನಲ್‌ಗೆ ಬಿದ್ದ ಪರಿಣಾಮ ಅವರಿಗೆ ಸಣ್ಣಪುಟ್ಟ ತರಚು ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಚನ್ನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣವು ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಗೆ ನೀಡಲಾಗುವ ಕಾರ್ಯಭಾರ, ಆಡಳಿತಾತ್ಮಕ ವರ್ತನೆ ಹಾಗೂ ಮಾನಸಿಕ ಕಿರುಕುಳದ ಗಂಭೀರತೆಯನ್ನು ಕಾನೂನು ದೃಷ್ಟಿಯಿಂದ ಪ್ರಶ್ನಿಸುವಂತಾಗಿದೆ. ಯಾವುದೇ ಸರ್ಕಾರಿ ಅಧಿಕಾರಿ ತಮ್ಮ ಅಧೀನ ಸಿಬ್ಬಂದಿಗೆ ಒತ್ತಡ, ಬೆದರಿಕೆ ಅಥವಾ ಮಾನಸಿಕ ಹಿಂಸೆ ನೀಡಿದರೆ, ಅದು ಭಾರತೀಯ ದಂಡ ಸಂಹಿತೆ (IPC)ಯ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರೇರಣೆ) ಹಾಗೂ 107 (ಪ್ರೇರಣೆ) ಅಡಿಯಲ್ಲಿ ಅಪರಾಧದ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದೆ. ಅಲ್ಲದೆ, ಸೇವಾ ನಿಯಮಗಳ ಪ್ರಕಾರ ಅಧಿಕಾರಿಗಳಿಂದ ಅಧಿಕಾರ ದುರುಪಯೋಗ ಅಥವಾ ದುರ್ವರ್ತನೆ ನಡೆದಿದೆ ಎಂದು ಸಾಬೀತಾದಲ್ಲಿ, ಶಿಸ್ತು ಕ್ರಮ ಹಾಗೂ ಇಲಾಖಾ ತನಿಖೆ ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ, ಪ್ರಕರಣದ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸತ್ಯಾಂಶ ಹೊರತೆಗೆದು ನ್ಯಾಯಯುತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment