ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ರಾಜ್ಯದಲ್ಲಿ ಭ್ರಷ್ಟರ ಬೇಟೆ: ಲೋಕಾಯುಕ್ತರ ಭರ್ಜರಿ ಕಾರ್ಯಾಚರಣೆ

On: February 12, 2026 6:24 PM
Follow Us:

ರಾಜ್ಯಾದ್ಯಂತ ಲೋಕಾಯುಕ್ತ ದಾಳಿ ಸಂಚಲನ: PWD ಮುಖ್ಯ ಎಂಜಿನಿಯರ್ ಸೇರಿ ಹಲವರ ಮನೆ–ಕಚೇರಿಗಳ ಮೇಲೆ ಏಕಕಾಲ ದಾಳಿ ಕೋಟ್ಯಂತರ ಮೌಲ್ಯದ ಆಸ್ತಿ, ಶಾಲೆಗಳು, ನಗದು–ಚಿನ್ನಾಭರಣ ಪತ್ತೆ; 11ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ

ಬೆಂಗಳೂರು/ಮೈಸೂರು/ಶಿವಮೊಗ್ಗ/ಧಾರವಾಡ: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ಕ್ರಮ ಮತ್ತೊಮ್ಮೆ ಭಾರೀ ಸದ್ದು ಮಾಡಿದೆ. ಲೋಕೋಪಯೋಗಿ ಇಲಾಖೆ (PWD) ಮುಖ್ಯ ಎಂಜಿನಿಯರ್ ಪುರುಷೋತ್ತಮ್ ದಾಸ್ ಸೇರಿದಂತೆ ವಿವಿಧ ಜಿಲ್ಲೆಗಳ ಮೂವರು ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಧಾರವಾಡ ಸೇರಿ ಅನೇಕ ಕಡೆಗಳಲ್ಲಿ ನಡೆದ ಈ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ, ನಗದು, ಚಿನ್ನಾಭರಣಗಳು ಹಾಗೂ ಮಹತ್ವದ ದಾಖಲೆಗಳು ಪತ್ತೆಯಾಗಿವೆ.


ಪುರುಷೋತ್ತಮ್ ದಾಸ್ ಮನೆ ಮೇಲೆ 11 ಕಡೆಗಳಲ್ಲಿ ದಾಳಿ

ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೆಂಗಳೂರಿನ 6 ಮತ್ತು ಮೈಸೂರಿನ 5 ಕಡೆಗಳನ್ನು ಸೇರಿಸಿ ಒಟ್ಟು 11 ಸ್ಥಳಗಳಲ್ಲಿ ದಾಳಿ ನಡೆದಿದೆ. ಪದ್ಮನಾಭನಗರದಲ್ಲಿರುವ ಪುರುಷೋತ್ತಮ್ ದಾಸ್ ಅವರ ನಾಲ್ಕು ಅಂತಸ್ತಿನ ಭವ್ಯ ಬಂಗಲೆಯಲ್ಲಿಯೇ ಮೊದಲಿಗೆ ಶೋಧ ಕಾರ್ಯ ಆರಂಭಿಸಲಾಯಿತು. ದಾಳಿ ವೇಳೆ ಅವರು ಮನೆಯಲ್ಲೇ ಇದ್ದು ಅಧಿಕಾರಿಗಳ ವಿಚಾರಣೆಗೆ ಸಹಕರಿಸಿದ್ದಾರೆ.

ಮನೆಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ. ಚಿನ್ನಾಭರಣಗಳ ಮೌಲ್ಯಮಾಪನ ಹಾಗೂ ನಗದು ಎಣಿಕೆ ಕಾರ್ಯ ಮುಂದುವರಿದಿದೆ. ಆಸ್ತಿ ದಾಖಲೆಗಳ ಪರಿಶೀಲನೆಯಲ್ಲಿ ಅವರ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮೈಸೂರಿನಲ್ಲಿ ಎರಡು ಶಾಲೆಗಳು, ಹಲವು ಮನೆಗಳು

ದಾಳಿಯ ವೇಳೆ ಮೈಸೂರಿನಲ್ಲಿ ಪುರುಷೋತ್ತಮ್ ದಾಸ್ ಅವರ ಹೆಸರಿನಲ್ಲಿ ಎರಡು ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಐದಾರು ಸ್ವಂತ ಮನೆಗಳು, ಅನೇಕ ಸೈಟ್‌ಗಳು ಮತ್ತು ವಾಣಿಜ್ಯ ಆಸ್ತಿಗಳ ದಾಖಲೆಗಳು ಪತ್ತೆಯಾಗಿವೆ.

“ಇದು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣ. ಮೈಸೂರಿನಲ್ಲಿ 5 ಮತ್ತು ಬೆಂಗಳೂರಿನಲ್ಲಿ 6 ಕಡೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ಅವರ ಹೆಸರಿನಲ್ಲಿ ಎರಡು ಶಾಲೆಗಳು ಹಾಗೂ ಹಲವು ಆಸ್ತಿ ದಾಖಲೆಗಳು ಪತ್ತೆಯಾಗಿವೆ,” ಎಂದು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ವಿಶೇಷವೆಂದರೆ, ಈ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಪುರುಷೋತ್ತಮ್ ದಾಸ್ ಅವರು ‘ಸತ್ಯಕಾಮ ಜಾಬಾಲ’ ಎಂಬ ಪುಸ್ತಕವನ್ನೂ ರಚಿಸಿರುವುದಾಗಿ ತಿಳಿದುಬಂದಿದೆ. ಸಾಹಿತ್ಯಿಕ ಅಭಿರುಚಿಯ ಹಿನ್ನೆಲೆಯಲ್ಲಿಯೇ ಇಷ್ಟೊಂದು ಪ್ರಮಾಣದ ಆಸ್ತಿ ಸಂಪಾದನೆ ಪ್ರಶ್ನೆಗೆ ಗುರಿಯಾಗಿದೆ.


ಶಿವಮೊಗ್ಗದಲ್ಲಿ ಎಇಇ ಅರ್ಜುನ್ ಆರ್.ಹೆಚ್. ಮನೆ ಮೇಲೂ ದಾಳಿ

ದಾವಣಗೆರೆಯ ಬೆಸ್ಕಾಂನಲ್ಲಿ ಸಿವಿಲ್ ವಿಭಾಗದ ಎಇಇ ಆಗಿ ಕಾರ್ಯನಿರ್ವಹಿಸಿದ್ದ ಅರ್ಜುನ್ ಆರ್.ಹೆಚ್. ಅವರ ನಿವಾಸ ಶಿವಮೊಗ್ಗದಲ್ಲಿದ್ದು, ಅದರ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳು ವಿಜಯನಗರ, ಗೋಪಾಳ ಸೇರಿದಂತೆ ಶಿವಮೊಗ್ಗದ ನಾಲ್ಕು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ.

ಅವರ ಮನೆ ಹಾಗೂ ವಾಣಿಜ್ಯ ಕಾಂಪ್ಲೆಕ್ಸ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಆಸ್ತಿ ವಿವರಗಳ ಸಂಗ್ರಹ ಕಾರ್ಯ ಮುಂದುವರಿದಿದೆ. ಅಕ್ರಮ ಆಸ್ತಿ ಗಳಿಕೆ ಸಂಬಂಧಿತ ದಾಖಲೆಗಳಿಗಾಗಿ ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.


ಧಾರವಾಡದಲ್ಲಿ ಎಡಿಎಲ್ಆರ್ ಸರ್ವೇಯರ್ ಮೇಲೆ ದಾಳಿ

ಇದೇ ವೇಳೆ ಧಾರವಾಡ ಜಿಲ್ಲೆಯಲ್ಲಿ ಭೂಮಾಪನ ಇಲಾಖೆಯ (ADLR) ಸರ್ವೇಯರ್ ಸೋಮಲಿಂಗಪ್ಪ ಸಿದ್ದನಗೌಡರ್ ಅವರ ನಿವಾಸ ಮತ್ತು ಕಚೇರಿಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದ ತಂಡವು ಮುಂಜಾನೆಯೇ ಕಾರ್ಯಾಚರಣೆಗೆ ಇಳಿದಿದೆ.

ಧಾರವಾಡದ ಭಾರತಿ ನಗರ ಸಮೀಪದ ಲಕ್ಷೇಶ್ವರ ಗಾರ್ಡನ್‌ನಲ್ಲಿರುವ ಅವರ ಬಂಗಲೆ, ಮುರಗೋಡ್‌ನಲ್ಲಿರುವ ಹಳೆಯ ನಿವಾಸ ಹಾಗೂ ಅವರು ಕರ್ತವ್ಯ ನಿರ್ವಹಿಸುತ್ತಿರುವ ಎಡಿಎಲ್ಆರ್ ಕಚೇರಿಗಳ ಮೇಲೆ ಏಕಕಾಲಕ್ಕೆ ಶೋಧ ನಡೆದಿದೆ. ದಾಖಲೆಗಳನ್ನು ಜಾಲಾಡಲಾಗುತ್ತಿದ್ದು, ಆಸ್ತಿ ವಿವರಗಳ ಪರಿಶೀಲನೆ ನಡೆಯುತ್ತಿದೆ.



ಇತರೆ ಅಧಿಕಾರಿಗಳ ಮೇಲೂ ದಾಳಿ

ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪ್ರಕಾರ ಕೆಳಗಿನ ಅಧಿಕಾರಿಗಳಿಗೂ ಸಂಬಂಧಿಸಿದ ಮನೆ ಹಾಗೂ ಕಚೇರಿಗಳ ಮೇಲೆ ಪರಿಶೀಲನೆ ನಡೆದಿದೆ:

  • ಬೆಂಗಳೂರು (ಎಲೆಕ್ಟ್ರಾನಿಕ್ ಸಿಟಿ) – RTO ಸೂಪರಿಂಟೆಂಡೆಂಟ್ ಕುಮಾರಸ್ವಾಮಿ
  • ಮಂಡ್ಯ – ನಗರ ಪಾಲಿಕೆ CAO ಪುಟ್ಟಸ್ವಾಮಿ
  • ಬೀದರ್ – ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್
  • ಮೈಸೂರು – ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್‌ಪೆಕ್ಟರ್ ರಾಮಸ್ವಾಮಿ ಸಿ
  • ಧಾರವಾಡ – ಕರ್ನಾಟಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಷ್ ಚಂದ್ರ
  • ಧಾರವಾಡ – ಪಶು ಚಿಕಿತ್ಸಾ ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ ಸತೀಶ್
  • ಶಿವಮೊಗ್ಗ – SIMS ಮೆಡಿಕಲ್ ಕಾಲೇಜಿನ FDA ಲಕ್ಷ್ಮೀಪತಿ ಸಿ.ಎನ್
  • ದಾವಣಗೆರೆ – APMC ಸಹ ನಿರ್ದೇಶಕ ಪ್ರಭು ಜೆ
  • ಮೈಸೂರು – ಮಡಿಕೇರಿ PWD ಸಹಾಯಕ ಇಂಜಿನಿಯರ್ ಗಿರೀಶ್ ಡಿ.ಎಂ
  • ಹಾವೇರಿ – ಯೋಜನಾ ನಿರ್ದೇಶಕ ಕಚೇರಿಯ ಇಇ ಶೇಕಪ್ಪ

ಈ ಎಲ್ಲರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪಗಳ ಹಿನ್ನೆಲೆ ಪರಿಶೀಲನೆ ನಡೆಯುತ್ತಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.


ರಾಜ್ಯಾದ್ಯಂತ ನಡೆದ ಈ ದಾಳಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತದ ಕಟ್ಟುನಿಟ್ಟಿನ ಕ್ರಮವೆಂದು ಪರಿಗಣಿಸಲಾಗುತ್ತಿದೆ. ಆಡಳಿತ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರಿಗಳ ಮೇಲೆ ಕ್ರಮ ಸಾಧ್ಯತೆ ಇರುವುದಾಗಿ ಮೂಲಗಳು ಸೂಚಿಸಿವೆ.

ಇವತ್ತು ರಾತ್ರಿ ವೇಳೆಗೆ ಸಂಪೂರ್ಣ ಆಸ್ತಿ ಮೌಲ್ಯದ ವಿವರ ಬಹಿರಂಗವಾಗುವ ನಿರೀಕ್ಷೆ ಇದೆ.

K.M.Sathish Gowda

Join WhatsApp

Join Now

Facebook

Join Now

Leave a Comment