ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ತ್ಯಾಜವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸತೀಶ್ ಹೆಚ್.ಎಂ (ಮುಂಚೆಮನೆ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

On: February 14, 2026 9:01 PM
Follow Us:

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ತ್ಯಾಜವಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸಾತ್ವಿಕ ನುಡಿ ಪತ್ರಿಕೆಯ ಸಂಪಾದಕ ಹಾಗೂ ಎರೇಕೊಪ್ಪ ಗ್ರಾಮದ ಸತೀಶ್ ಹೆಚ್.ಎಂ (ಮುಂಚೆಮನೆ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಆಡಳಿತ ಮಂಡಳಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನ ಭರ್ತಿಗಾಗಿ ಚುನಾವಣೆಯನ್ನು ಆಯೋಜಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಹೆಚ್.ಎಂ (ಮುಂಚೆಮನೆ) ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇತರರು ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ, ಸತೀಶ್ ರವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.

ಚುನಾವಣೆ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಅಶೋಕ್ ಹೆಚ್.ಎಲ್ ಅವರು ನಡೆಸಿಕೊಟ್ಟರು. ಸಹಕಾರ ಚುನಾವಣಾ ಪ್ರಾಧಿಕಾರವು ಸಹಕಾರ ಸಂಘಗಳ ಉಪನಿಬಂಧಕರು, ಶಿವಮೊಗ್ಗ ಇವರಿಗೆ ನಿಯೋಜಿಸಿದ್ದ ಅಧಿಕಾರದಂತೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತ್ಯಾಜವಳ್ಳಿ ಇದರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಶಿವಮೊಗ್ಗದ ಮಾರಾಟಾಧಿಕಾರಿಯನ್ನು ರಿಟರ್ನಿಂಗ್ ಅಧಿಕಾರಿಯಾಗಿ ನೇಮಿಸಲಾಗಿತ್ತು. ಸಂಘದ ಕಾರ್ಯ ನಿರ್ವಹಣಾಧಿಕಾರಿ ಶಂಕರಪ್ಪ ಮತ್ತು ಸಿಬ್ಬಂದಿ ವರ್ಗ ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಸತೀಶ್ ಹೆಚ್.ಎಂ (ಮುಂಚೆಮನೆ) ಅವರು, ರೈತಪರ ಯೋಜನೆಗಳಿಗೆ ಪ್ರಾಮುಖ್ಯತೆ ನೀಡುವುದಾಗಿ ತಿಳಿಸಿದರು. ಸಂಘದ ಮೂಲಕ ತ್ವರಿತ ಮತ್ತು ಸರಳ ವಿಧಾನದಲ್ಲಿ ವಿನೂತನ ಬೆಳೆ ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೂರು ವರ್ಷಗಳ ಅವಧಿಗೆ ಸಾಲ ಮಿತಿ ಮಂಜೂರಾತಿ ಮಾಡುವ ವ್ಯವಸ್ಥೆ ಜಾರಿಗೊಳಿಸುವುದಾಗಿ ಅವರು ತಿಳಿಸಿದರು. ಮಂಜೂರಾದ ಸಾಲ ಮಿತಿಯೊಳಗೆ ರೈತರು ತಮ್ಮ ಅಗತ್ಯಕ್ಕೆ ತಕ್ಕಂತೆ ಬೇಕಾದಾಗ ಸಾಲ ಪಡೆಯುವ ಮತ್ತು ಮರುಪಾವತಿ ಮಾಡುವ ಸೌಲಭ್ಯ ಕಲ್ಪಿಸಲಾಗುವುದು ಎಂದರು. ರೈತರು ಬಳಸಿದ ಅವಧಿಗೆ ಮಾತ್ರ ಬಡ್ಡಿ ಪಾವತಿಸುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದು ಹೇಳಿದರು.

ಇದರ ಜೊತೆಗೆ ರೈತರಿಗೆ ವಿಮೆ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸುವುದಾಗಿ ಭರವಸೆ ನೀಡಿದರು. ಸೂಚಿತ ಬೆಳೆಗಳಿಗೆ ಬೆಳೆ ವಿಮೆ ಸೌಲಭ್ಯಗಳನ್ನು ಸಮರ್ಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದಾಗಿ ಹೇಳಿದರು.

ಸಂಘದ ಮೂಲಕ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಪ್ರಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಜಾರಿಗೆ ತಂದು, ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸುವುದಾಗಿ ಅವರು ತಿಳಿಸಿದರು.

ಶಿವಮೊಗ್ಗ ತಾಲ್ಲೂಕಿನ ತ್ಯಾಜವಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಸತೀಶ್ ಹೆಚ್.ಎಂ (ಮುಂಚೆಮನೆ) ಅವರು ಸಂಘದ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಸಂಘದ ಕಚೇರಿ ಕಟ್ಟಡದ ಪ್ರಸ್ತುತ ಸ್ಥಿತಿ ಹಾಗೂ ಮೂಲಸೌಕರ್ಯಗಳ ಕೊರತೆ ಗಮನದಲ್ಲಿಟ್ಟುಕೊಂಡು, ಕಟ್ಟಡವನ್ನು ಮರುನಿರ್ಮಾಣ ಮಾಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ.

ಸಂಘದ ಕಟ್ಟಡದಲ್ಲಿ ಶೀತಲೀಕರಣ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ರೈತರು ಹಾಗೂ ಸದಸ್ಯರು ಸಂಘದ ಸೇವೆಗಳನ್ನು ಪಡೆಯಲು ಆಗಮಿಸುವಾಗ ಅವರಿಗೆ ಸುಸಜ್ಜಿತ ವಾತಾವರಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಹಳೆಯ ಕಟ್ಟಡವನ್ನು ಮರುನಿರ್ಮಿಸಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ನೂತನ ಕಟ್ಟಡ ನಿರ್ಮಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಈ ಕಾರ್ಯವನ್ನು ಏಕಪಕ್ಷೀಯವಾಗಿ ಕೈಗೊಳ್ಳುವುದಿಲ್ಲ. ಸಂಘದ ಸದಸ್ಯರು, ರೈತರು ಹಾಗೂ ಅಕ್ಕಪಕ್ಕದ ಗ್ರಾಮಗಳ ಮುಖಂಡರ ವಿಶ್ವಾಸವನ್ನು ಪಡೆದು, ಸಮಗ್ರ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಎಲ್ಲರ ಸಹಕಾರ ಮತ್ತು ಸಲಹೆಗಳೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದಾಗಿ ಅವರು ಹೇಳಿದರು.

ನೂತನ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಸಂಸದರಿಂದ ಅನುದಾನ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸತೀಶ್ ಹೆಚ್.ಎಂ ತಿಳಿಸಿದರು. ಅಗತ್ಯವಿದ್ದರೆ ವಿವಿಧ ಯೋಜನೆಗಳ ಮೂಲಕವೂ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದರು.

ಸುಸಜ್ಜಿತ ಹಾಗೂ ಆಧುನಿಕ ಸೌಲಭ್ಯಗಳನ್ನೊಳಗೊಂಡ ಸಂಘದ ಕಚೇರಿ ನಿರ್ಮಾಣವಾಗುವುದರಿಂದ ರೈತರಿಗೆ ಉತ್ತಮ ಸೇವೆ ದೊರೆಯಲಿದೆ. ಸಾಲ ವಿತರಣೆ, ವಿಮೆ, ದಾಖಲೆ ಸೇವೆಗಳು ಸೇರಿದಂತೆ ವಿವಿಧ ಕಾರ್ಯಗಳನ್ನು ವೇಗವಾಗಿ ಹಾಗೂ ಸುಗಮವಾಗಿ ನಿರ್ವಹಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಸಂಘವನ್ನು ಮಾದರಿ ಸಹಕಾರ ಸಂಸ್ಥೆಯಾಗಿ ರೂಪಿಸುವ ದೃಢ ಸಂಕಲ್ಪ ಹೊಂದಿರುವುದಾಗಿ ಸತೀಶ್ ಹೆಚ್.ಎಂ (ಮುಂಚೆಮನೆ) ಅವರು ಹೇಳಿದರು. ಸದಸ್ಯರ ಹಿತಾಸಕ್ತಿಯನ್ನು ಕಾಪಾಡುತ್ತಾ, ರೈತಪರ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವುದಾಗಿ ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತ್ಯಾಜವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು, ನಿರ್ದೇಶಕರು, ಗ್ರಾಮ ಮುಖಂಡರು ಹಾಗೂ ಸ್ನೇಹಿತರು ನೂತನ ಅಧ್ಯಕ್ಷರಾದ ಸತೀಶ್ ಹೆಚ್.ಎಂ (ಮುಂಚೆಮನೆ) ಅವರಿಗೆ ಶುಭಾಶಯಗಳನ್ನು ತಿಳಿಸಿದರು. ಅವರ ನಾಯಕತ್ವದಲ್ಲಿ ಸಂಘ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ, ರೈತಪರ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಗೆ ಬರಲಿ ಎಂದು ಆಶಿಸಿದರು. ಸಂಘದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸದಸ್ಯರು ವಿಶ್ವಾಸ ವ್ಯಕ್ತಪಡಿಸಿದರು.

K.M.Sathish Gowda

Join WhatsApp

Join Now

Facebook

Join Now

Leave a Comment