ಧಾರವಾಡ: ವಿದ್ಯಾಕಾಶಿ ಎಂದೇ ಪ್ರಸಿದ್ಧಿಯಾದ ಧಾರವಾಡ ನಗರವು ಇಂದು ಸಾವಿರಾರು ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಆಕ್ರೋಶಕ್ಕೆ ಸಾಕ್ಷಿಯಾಯಿತು. ರಾಜ್ಯದಲ್ಲಿ ಖಾಲಿ ಇರುವ 2.80 ಲಕ್ಷ ಸರ್ಕಾರಿ ಹುದ್ದೆಗಳ ತಕ್ಷಣದ ಭರ್ತಿಗೆ ಆಗ್ರಹಿಸಿ ಅಭ್ಯರ್ಥಿಗಳು ಭಾರೀ ಪ್ರತಿಭಟನೆ, ರ್ಯಾಲಿ ಹಾಗೂ ಘೋಷಣೆಗಳ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದರು. ಕೆಲವೆಡೆ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿ ಕಲ್ಲುತೂರಾಟವೂ ನಡೆದಿದ್ದು, ನಗರದಲ್ಲಿ ಉದ್ವಿಗ್ನ ವಾತಾವರಣ ಆವರಿಸಿತು.
“ಬೇಕೇ ಬೇಕು ನ್ಯಾಯ” ಘೋಷಣೆ ಮೊಳಗಿಸಿದ ಅಭ್ಯರ್ಥಿಗಳು
ಶ್ರೀನಗರ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಉದ್ಯೋಗಾಕಾಂಕ್ಷಿಗಳು “ಬೇಕೇ ಬೇಕು ನ್ಯಾಯ”, “ವೀ ವಾಂಟ್ ಜಸ್ಟೀಸ್”, “ಸರ್ಕಾರಕ್ಕೆ ಧಿಕ್ಕಾರ” ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಗೆ ಪೊಲೀಸರಿಂದ ಪೂರ್ವಾನುಮತಿ ನಿರಾಕರಿಸಲ್ಪಟ್ಟಿದ್ದರೂ, ಅಭ್ಯರ್ಥಿಗಳು ಬೃಹತ್ ರ್ಯಾಲಿ ನಡೆಸಿ ಜಯನಗರ ವೃತ್ತದವರೆಗೆ ಮೆರವಣಿಗೆ ನಡೆಸಿದರು.

ಕಳೆದ ಎರಡು ವರ್ಷಗಳಿಂದ ಯಾವುದೇ ಪ್ರಮುಖ ಸರ್ಕಾರಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿಲ್ಲವೆಂದು ಆರೋಪಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಕಿಡಿಕಾರಿದರು. “ಪಂಚ ಗ್ಯಾರಂಟಿಗಳ ಜಾರಿಯಲ್ಲೇ ತೊಡಗಿರುವ ಸರ್ಕಾರಕ್ಕೆ ಯುವಜನರ ಭವಿಷ್ಯ ಕಾಣಿಸುತ್ತಿಲ್ಲ” ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಸಾಥ್, ರಾಜಕೀಯ ತೀವ್ರತೆ
ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಬಿಜೆಪಿ ನಾಯಕರು ಬೆಂಬಲ ಸೂಚಿಸಿದರು. ವಿಪಕ್ಷ ನಾಯಕ ಆರ್.ಅಶೋಕ್ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಅರವಿಂದ್ ಬೆಲ್ಲದ್ ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ಮೂರು ವರ್ಷಗಳಲ್ಲಿ ಒಂದು ನೇಮಕಾತಿಯನ್ನೂ ಪೂರ್ಣಗೊಳಿಸಲು ಆಗದ ಸರ್ಕಾರ ದಿವಾಳಿಯಾಗಿದೆ. ಹಣ ಇಲ್ಲ ಎನ್ನುವುದು ನೆಪ ಮಾತ್ರ” ಎಂದು ಆರ್. ಅಶೋಕ್ ಟೀಕಿಸಿದರು. ಸರ್ಕಾರ ಉದ್ಯೋಗ ಸೃಷ್ಟಿಯ ಬಗ್ಗೆ ಗಂಭೀರವಾಗಿಲ್ಲ ಎಂದು ಅವರು ಆರೋಪಿಸಿದರು.
ಇದಕ್ಕೂ ಮಧ್ಯೆ, ಪ್ರತಿಭಟನೆಯಲ್ಲಿ ಕೆಲ ಅಭ್ಯರ್ಥಿಗಳು ಬಿಜೆಪಿ ನಾಯಕರ ಬ್ಯಾನರ್ಗಳನ್ನು ಹರಿದು ಹಾಕಿ “ರಾಜಕೀಯ ಬೇಡ, ಉದ್ಯೋಗ ಬೇಕು” ಎಂಬ ಘೋಷಣೆ ಕೂಗಿದ ಘಟನೆ ಕೂಡ ಗಮನ ಸೆಳೆಯಿತು. ಇದರಿಂದ ಹೋರಾಟ ರಾಜಕೀಯ ಬಣ್ಣ ಪಡೆಯುತ್ತಿರುವ ಬಗ್ಗೆ ಚರ್ಚೆಗಳು ಜೋರಾದವು.

ಉದ್ರಿಕ್ತ ಪರಿಸ್ಥಿತಿ: ಕಲ್ಲುತೂರಾಟ
ಪ್ರತಿಭಟನೆ ವೇಳೆ ಉದ್ರಿಕ್ತರಿಂದ ಕಲ್ಲುತೂರಾಟ ನಡೆದಿದ್ದು, ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಫೀಕ್ ಹಾಗೂ ತಹಸೀಲ್ದಾರ್ ಗಾಯಗೊಂಡಿದ್ದಾರೆ. ಶಶಿಕುಮಾರ್ ನೇತೃತ್ವದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಸಿಬ್ಬಂದಿ ಭದ್ರತಾ ಕ್ರಮ ಕೈಗೊಂಡರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಸರ್ಕಾರದ ಪ್ರತಿಕ್ರಿಯೆ
ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವಿಪಕ್ಷಗಳು ತೀವ್ರ ಟೀಕೆ ನಡೆಸುತ್ತಿರುವಾಗ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭ್ಯರ್ಥಿಗಳ ಪ್ರತಿಭಟನೆಯನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. “ನೇಮಕಾತಿ ಪ್ರಕ್ರಿಯೆಗಳು ಹಂತ ಹಂತವಾಗಿ ನಡೆಯುತ್ತಿವೆ” ಎಂಬುದು ಸರ್ಕಾರದ ವಾದ.
ನೇಮಕಾತಿ ಪ್ರಕ್ರಿಯೆಗೆ ಗ್ರಹಣ?
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.80 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗೆ ಸ್ಪಷ್ಟ ವೇಳಾಪಟ್ಟಿ ಪ್ರಕಟಿಸಬೇಕೆಂಬುದು ಅಭ್ಯರ್ಥಿಗಳ ಒತ್ತಾಯವಾಗಿದೆ. “ಹತ್ತಿರ ಮೂರು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಗೆ ಗ್ರಹಣ ಬಿದ್ದಂತಾಗಿದೆ. ಲಕ್ಷಾಂತರ ಅಭ್ಯರ್ಥಿಗಳು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ನೋವು ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ವಿದ್ಯಾಕಾಶಿ ಧಾರವಾಡದಲ್ಲಿ ಉಂಟಾದ ಈ ಪ್ರತಿಭಟನೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರ ತ್ವರಿತ ಕ್ರಮ ಕೈಗೊಂಡು ಖಾಲಿ ಹುದ್ದೆಗಳ ಭರ್ತಿಗೆ ಚಾಲನೆ ನೀಡದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.






