ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು 17ನೇ ಬಾರಿ ರಾಜ್ಯ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗುತ್ತಿರುವ ಈ ಮಹತ್ವದ ಕ್ಷಣದ ಅಂಗವಾಗಿ, ಅವರ ಅಭಿಮಾನಿಗಳು ಮತ್ತು ಬೆಂಬಲಿಗರು ಧಾರ್ಮಿಕ ಪೂಜೆ-ಪುನಸ್ಕಾರಗಳ ಮೂಲಕ ಶುಭಾಶಯ ಕೋರಿದರು.
ಕೋಟೆ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಅವರ ನೇತೃತ್ವದಲ್ಲಿ “ಕರುನಾಡ ದೊರೆ ಸಿದ್ದರಾಮಯ್ಯ ಅಭಿಮಾನಿ ಬಳಗ”ದಿಂದ ಕೋಟೆ ಶ್ರೀ ಮಾರಮ್ಮ ದೇವಿಗೆ ಮಡ್ಲಕ್ಕಿ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯದ ಜನತೆಗೆ ಇನ್ನಷ್ಟು ಜನಪರ ಯೋಜನೆಗಳನ್ನು ನೀಡುವ ಶಕ್ತಿ ಹಾಗೂ ಆರೋಗ್ಯವನ್ನು ಮುಖ್ಯಮಂತ್ರಿಗಳಿಗೆ ದೇವರು ಕರುಣಿಸಲಿ, ರಾಜ್ಯದ ಆಡಳಿತ ಸುದೀರ್ಘವಾಗಿ, ಸುಗಮವಾಗಿ ನಡೆಯಲಿ ಎಂದು ಭಕ್ತಿಭಾವದಿಂದ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಯುವ ಮುಖಂಡ ಕೆ. ರಂಗನಾಥ್ ಮಾತನಾಡಿ “ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತಕ್ಕೆ ಬದ್ಧರಾಗಿರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿಗೆ ದಿಕ್ಕು ತೋರಿಸುವ ಮತ್ತೊಂದು ಬಜೆಟ್ ಮಂಡಿಸಲಿದ್ದಾರೆ. ರೈತರು, ಮಹಿಳೆಯರು, ಯುವಕರು ಹಾಗೂ ಬಡ ವರ್ಗದ ಜನರಿಗೆ ಅನುಕೂಲಕರ ಯೋಜನೆಗಳು ಮುಂದುವರಿಯಲಿ” ಎಂದು ಆಶಯ ವ್ಯಕ್ತಪಡಿಸಿದರು.
ಈ ಪೂಜಾ ಕಾರ್ಯಕ್ರಮದಲ್ಲಿ ಯುವ ಮುಖಂಡ ಕೆ. ರಂಗನಾಥ್, ಸೂಡ ಸದಸ್ಯ ಎಂ. ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಬಿ. ಲೋಕೇಶ್, ಗ್ಯಾರೆಂಟಿ ಪ್ರಾಧಿಕಾರದ ಸದಸ್ಯರಾದ ಎಸ್. ಕುಮಾರೇಶ್ ಮತ್ತು ಎಸ್. ಬಸವರಾಜ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಪ್ರಮುಖರಾದ ಹೆಚ್.ಪಿ. ಗಿರೀಶ್, ಎಂ. ರಾಕೇಶ್, ಕೆ.ಎಲ್. ಪವನ್, ಗುರುಪ್ರಸಾದ್, ಮನ್ವಿಕ್ ಜೈನ್, ಚೇತನ್, ಸುಹಾಸ್, ನಾಗೇಶ್, ಹರೀಶ್, ಪ್ರಜ್ವಲ್, ಭವಿತ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮುಖ್ಯಮಂತ್ರಿಗಳ 17ನೇ ಬಜೆಟ್ ಮಂಡನೆಗೆ ರಾಜ್ಯದಾದ್ಯಂತ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿದ್ದು, ಅಭಿಮಾನಿಗಳಿಂದ ಹಾರೈಕೆಗಳ ಸುರಿಮಳೆ ಹರಿದುಬರುತ್ತಿದೆ.








