ಕಲ್ಬುರ್ಗಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಸಂಘರ್ಷ ಹಾಗೂ ಅಮೆರಿಕದ ಹಸ್ತಕ್ಷೇಪದಿಂದ ವಿಶ್ವ ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ಮಹತ್ತರ ಪರಿಣಾಮ ಬೀಳುತ್ತಿದೆ. ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಇಂಧನ ಬೆಲೆಗಳಲ್ಲಿ ಏರಿಕೆ ಕಂಡುಬರುತ್ತಿದ್ದು, ವಾಹನ ಮಾಲೀಕರಿಗೆ ಭಾರವಾಗುತ್ತಿದೆ. ಇದರ ಜೊತೆಗೆ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆ ಕೂಡ ಹೆಚ್ಚಳವಾಗಿರುವುದರಿಂದ ಸಾಮಾನ್ಯ ಜನರ ಜೀವನ ವೆಚ್ಚ ಹೆಚ್ಚಾಗಿದೆ.
ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಖರ್ಗೆ ಕಿಡಿ
ಈ ಬೆಳವಣಿಗೆಗಳ ಮಧ್ಯೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಕಲ್ಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದರು.

‘ಟ್ರಂಪ್ ಮಾತಿಗೆ ಮೋದಿ ನಡೆ’ – ಖರ್ಗೆ ಆರೋಪ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಮಾತನಾಡಿದ ಖರ್ಗೆ, “ಟ್ರಂಪ್ ಒಬ್ಬ ಸರ್ವಾಧಿಕಾರಿ ಸ್ವಭಾವದ ನಾಯಕ. ಪ್ರಧಾನಿ ಮೋದಿ ಅವರು ಅವರ ಗುಲಾಮನಂತೆ ನಡೆಯುವ ಸ್ಥಿತಿಗೆ ತಲುಪಿದ್ದಾರೆ” ಎಂದು ಆರೋಪಿಸಿದರು. “ಅಮೆರಿಕ ಹೇಳಿದಂತೆ ‘ಬೈಟೋ ಅಂದ್ರೆ ಬೈಟೋ, ಉಟೋ ಅಂದ್ರೆ ಉಟೋ’ ಎನ್ನುವ ರೀತಿಯಲ್ಲಿ ಭಾರತ ಸರ್ಕಾರ ನಡೆದುಕೊಳ್ಳುತ್ತಿದೆ” ಎಂದು ವ್ಯಂಗ್ಯವಾಡಿದರು.
ಅಮೆರಿಕದ ದಬ್ಬಾಳಿಕೆ ವಿಶ್ವ ಶಾಂತಿಗೆ ಧಕ್ಕೆ
ಅಮೆರಿಕದ ಜಾಗತಿಕ ರಾಜಕೀಯದ ಬಗ್ಗೆ ಕೂಡ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ಇಂದು ಅಮೆರಿಕ ವಿಶ್ವದ ಮೇಲೆ ದಬ್ಬಾಳಿಕೆ ಮಾಡುವ ಧೋರಣೆಯನ್ನು ಅನುಸರಿಸುತ್ತಿದೆ. ಇಂತಹ ನೀತಿಯಿಂದ ವಿಶ್ವದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಇಂತಹ ದೇಶದ ಅಧ್ಯಕ್ಷರೊಂದಿಗೆ ಕೈಜೋಡಿಸಿ ಪ್ರಧಾನಿ ಮೋದಿ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ” ಎಂದು ಹೇಳಿದರು.
‘ದೇಶ ಕಟ್ಟಿದ ಕಾಂಗ್ರೆಸ್, ದೇಶ ಹಾಳು ಮಾಡುತ್ತಿದೆ ಬಿಜೆಪಿ’
ಇದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದ ಕುರಿತು ಮಾತನಾಡಿದ ಖರ್ಗೆ, “ಈ ದೇಶದಲ್ಲಿ ದೊಡ್ಡ ಕೈಗಾರಿಕೆಗಳು, ರಸ್ತೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಸರ್ಕಾರವೇ ನಿರ್ಮಿಸಿದೆ. ಆದರೆ ಇಂದಿನ ಸರ್ಕಾರ ದೇಶದ ಏಕತೆಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದರು.

‘ಕಾಂಗ್ರೆಸ್ ಟೀಕೆಯೇ ಮೋದಿ ದಿನಚರಿ’
“ಪ್ರಧಾನಿ ಮೋದಿ ಬೆಳಿಗ್ಗೆಯಿಂದ ಸಂಜೆವರೆಗೂ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಲ್ಲದೇ ಮತ್ತೇನು ಕೆಲಸ ಮಾಡುತ್ತಿಲ್ಲ. ದೇಶದ ಅಭಿವೃದ್ಧಿ ಕುರಿತು ಮಾತನಾಡುವುದಕ್ಕಿಂತ ರಾಜಕೀಯ ಆರೋಪ-ಪ್ರತ್ಯಾರೋಪಗಳೇ ಹೆಚ್ಚು ಆಗುತ್ತಿವೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ವಿರುದ್ಧ ನಿರಂತರ ಟೀಕೆ ಮಾಡಲಾಗುತ್ತಿದೆ” ಎಂದು ಖರ್ಗೆ ಹೇಳಿದರು.
ಇರಾನ್ ನೌಕೆ ದಾಳಿ ವಿಚಾರದಲ್ಲಿ ಮೋದಿ ಮೌನ?
ಅಂತರಾಷ್ಟ್ರೀಯ ಘಟನೆಗಳನ್ನು ಉಲ್ಲೇಖಿಸಿ ಅವರು ಪ್ರಶ್ನಿಸಿದರು: “ಹಿಂದೂ ಮಹಾಸಾಗರ ಪ್ರದೇಶದಲ್ಲಿ ಇರಾನ್ ನೌಕೆಯ ಮೇಲೆ ಅಮೆರಿಕದ ದಾಳಿ ನಡೆದಿದ್ದರೂ ಪ್ರಧಾನಿ ಮೋದಿ ಅದ ಬಗ್ಗೆ ಮಾತನಾಡಲಿಲ್ಲ. ದೇಶದ ಸುರಕ್ಷತೆ ಮತ್ತು ವಿದೇಶಾಂಗ ನೀತಿಗಳ ಕುರಿತು ಸ್ಪಷ್ಟ ನಿಲುವು ತಾಳಬೇಕಾದ ಅಗತ್ಯವಿದೆ” ಎಂದು ಹೇಳಿದರು.
ಯುವಕರಿಗೆ ಉದ್ಯೋಗ ನೀಡುವುದು ಸರ್ಕಾರದ ಕರ್ತವ್ಯ
ಯುವಕರ ಉದ್ಯೋಗ ಸಮಸ್ಯೆಯನ್ನೂ ಉಲ್ಲೇಖಿಸಿದ ಖರ್ಗೆ, “ದೇಶವನ್ನು ಕೇವಲ ಭಾಷಣಗಳಿಂದ ಅಥವಾ ಮಂತ್ರಗಳಿಂದ ಉಳಿಸಲು ಸಾಧ್ಯವಿಲ್ಲ. ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು ಸರ್ಕಾರದ ಮುಖ್ಯ ಕರ್ತವ್ಯ. ದೇಶದಲ್ಲಿ ಸಂಕಷ್ಟ ಬಂದರೆ ಶ್ರೀಮಂತರು ವಿದೇಶಗಳಿಗೆ ತೆರಳಬಹುದು, ಆದರೆ ಬಡಜನರಿಗೆ ಎಲ್ಲಿಗೆ ಹೋಗುವ ಅವಕಾಶ ಇದೆ?” ಎಂದು ಪ್ರಶ್ನಿಸಿದರು.
‘ಜನರು ಸರಿಯಾದ ಸಮಯದಲ್ಲಿ ಪಾಠ ಕಲಿಸುತ್ತಾರೆ’
ಪ್ರಧಾನಿ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, “ದೇಶದ ಪರಿಸ್ಥಿತಿ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಬೇಕು. ಜನರು ಸತ್ಯವನ್ನು ಅರಿತುಕೊಂಡು ಸರಿಯಾದ ಸಮಯದಲ್ಲಿ ಪಾಠ ಕಲಿಸುವರು” ಎಂದು ಹೇಳಿದರು.







