ಶಿವಮೊಗ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ ದುರ್ಘಟನೆಯ ರಸ್ತೆ ಅಪಘಾತದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮೂವರು ಅಧಿಕಾರಿಗಳು ದುರ್ಭಾಗ್ಯವಶಾತ್ ಪ್ರಾಣ ಕಳೆದುಕೊಂಡ ಘಟನೆ ರಾಜ್ಯದೆಲ್ಲೆಡೆ ದುಃಖದ ವಾತಾವರಣವನ್ನುಂಟುಮಾಡಿದೆ. ಈ ಅಪಘಾತದಲ್ಲಿ ಅಮರೇಶ್ ಬಿ. (ಆರ್.ಎಸ್.ಐ), ಮಂಜುನಾಥ್ ದಾರಿಮನಿ (ಆರ್.ಎಸ್.ಐ) ಹಾಗೂ ಸಚಿನ್ ವಿ. (ಆರ್.ಎಸ್.ಐ) ರವರು ಮೃತಪಟ್ಟಿದ್ದಾರೆ.

ಮೃತರಾದ ಪೊಲೀಸ್ ಅಧಿಕಾರಿಗಳಿಗೆ ಗೌರವ ನಮನ ಸಲ್ಲಿಸುವ ಉದ್ದೇಶದಿಂದ 16-03-2026 ರಂದು ಬೆಳಿಗ್ಗೆ, ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ., ಐಪಿಎಸ್ ಅವರು, ಶಿವಮೊಗ್ಗ ಜಿಲ್ಲೆಯ ಕುಡುವಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ದಿವಂಗತ ಸಚಿನ್ ವಿ. (ಆರ್.ಎಸ್.ಐ) ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ವಂದನೆಗಳನ್ನು ಅರ್ಪಿಸಿದರು.

ಅದರ ಜೊತೆಗೆ, ಮೃತ ಅಧಿಕಾರಿಯ ಕುಟುಂಬಸ್ಥರನ್ನು ಭೇಟಿ ಮಾಡಿದ ಪೊಲೀಸ್ ಅಧೀಕ್ಷಕರು ಅವರಿಗೆ ಸಾಂತ್ವಾನ ಹೇಳಿ, ಈ ದುಃಖದ ಸಮಯದಲ್ಲಿ ಪೊಲೀಸ್ ಇಲಾಖೆ ಸದಾ ಅವರೊಂದಿಗೇ ನಿಲ್ಲುತ್ತದೆ ಎಂದು ಭರವಸೆ ನೀಡಿದರು. ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ಸೇವಾ ನಿಷ್ಠೆ ಮತ್ತು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದ ಸಚಿನ್ ವಿ. ಅವರ ಸೇವೆಯನ್ನು ಸ್ಮರಿಸಿ, ಅವರ ಅಗಲಿಕೆ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಈ ವೇಳೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂವರು ಆರ್.ಎಸ್.ಐ ಅಧಿಕಾರಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಮೌನಾಚರಣೆ ನಡೆಸಿ, ಮೃತ ಆತ್ಮಗಳಿಗೆ ಶಾಂತಿಸಿಗಲೆಂದು ಪ್ರಾರ್ಥಿಸಿದರು.







