ನವದೆಹಲಿ, ಡಿ.1: ಸಂಸದ ಶಶಿ ತರೂರ್ ಅವರು ಕಾಂಗ್ರೆಸ್ ಪಕ್ಷ ತೊರೆಯಲು ಸಿದ್ದರಾಗಿದ್ದಾರೆ ಎಂಬ ರಾಜಕೀಯ ವಲಯದಲ್ಲಿ ಗುಸುಗುಸು ಮತ್ತಷ್ಟು ಗಟ್ಟಿ ಆಗಿದೆ. ನಾಲ್ಕು ಬಾರಿ ಸಂಸದರಾಗಿರುವ ತರೂರ್ ಅವರು ಪಕ್ಷದ ಪ್ರಮುಖ ಮುಖವಾಗಿದ್ದರೂ, ಇತ್ತಿಚಿನ ದಿನಗಳಲ್ಲಿ ಕಾಂಗ್ರೆಸ್ನ ಮಹತ್ತರ ಸಭೆಗಳಿಗೆ ಗೈರುಹಾಜರಾಗುತ್ತಿರುವುದು ಈ ಊಹಾಪೋಹಕ್ಕೆ ಕಾರಣವಾಗಿದೆ.
ಕೇರಳವು ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಸಜ್ಜಗುತ್ತಿದೆ. ಈ ಹಿನ್ನೆಲೆಯಲ್ಲಿ, ತರೂರ್ ಅವರು ಪಕ್ಷ ಬದಲಾಯಿಸಲು ನಿರ್ಧರಿಸಿದರೆ, ಅದನ್ನು ಚುನಾವಣೆಗೆ ಮುನ್ನವೇ ಮಾಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಆದರೆ, ತಾವು ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ತರೂರ್ ಸ್ಪಷ್ಟಪಡಿಸಿದ್ದು, ತಮ್ಮ ವಯೋವೃದ್ಧ ತಾಯಿಯ ಆರೈಕೆಗೆ ಕೇರಳದಲ್ಲಿದ್ದ ಕಾರಣದಿಂದಲೇ ಸಭೆಗಳಲ್ಲಿ ಭಾಗವಹಿಸಲಿಲ್ಲ ಎಂದು ಹೇಳಿದ್ದಾರೆ.
ನಿನ್ನೆ ಸಂಜೆ ಸೋನಿಯಾ ಗಾಂಧಿಯವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಹಾಜರಿದ್ದರು. ಇಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದ ಕಾರ್ಯತಂತ್ರ ಈ ಸಭೆಯ ಮುಖ್ಯ ಅಂಶವಾಗಿತ್ತು. ಆದರೆ ತರೂರ್ ಮತ್ತೆ ಗೈರುಹಾಜರಾಗಿದ್ದರು. ಇದು ಅವರು ತಪ್ಪಿಸಿಕೊಂಡ ಎರಡನೇ ಪ್ರಮುಖ ಸಭೆ.
ಇದಕ್ಕೂ ಮೊದಲು, ನವೆಂಬರ್ 18ರಂದು ನಡೆದ ತುರ್ತು ಕಾರ್ಯಯೋಜನಾ ಸಭೆಗೂ ಅವರು ಹಾಜರಾಗಿರಲಿಲ್ಲ. ಅಂದು ತಾವು ಅಸ್ವಸ್ಥರಾಗಿದ್ದೇನೆ ಎಂದು ತಿಳಿಸಿದ್ದರೂ, ಅದೇ ಸಂಜೆಯಂದು ಪ್ರಧಾನಿ ನರೇಂದ್ರ ಮೋದಿ ಅವರ ಉಪನ್ಯಾಸದಲ್ಲಿ ಭಾಗವಹಿಸಿದ್ದರಿಂದ ರಾಜಕೀಯ ವಲಯದಲ್ಲಿ ಪ್ರಶ್ನೆಗಳು ಎದ್ದಿದ್ದವು. ಮೋದಿ ಅವರ ಭಾಷಣವನ್ನು ತರೂರ್ ಮೆಚ್ಚಿಕೊಂಡಿದ್ದು, ಕಾಂಗ್ರೆಸ್ಗೆ ಗುರಿಯಾಗಿಸಿದ ಪ್ರಧಾನಿಯ ಟೀಕೆಗೆ ಅವರು ನೀಡಿದ ಪ್ರತಿಕ್ರಿಯೆ ಇನ್ನಷ್ಟು ಗಮನ ಸೆಳೆದಿತ್ತು.
ಇತ್ತ ಕೇರಳದಲ್ಲಿ ಎಡಪಂಥೀಯರು, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಸ್ಥಳೀಯ ಸಂಸ್ಥೆ ಚುನಾವಣೆಗಳ ಸಿದ್ಧತೆಯಲ್ಲಿ ತೊಡಗಿವೆ. ಇದಲ್ಲದೆ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹರಿಹಾಯ್ದ ಸಭೆಗೆ ಗೈರುಹಾಜರಾಗಿದ್ದರೂ, ತರೂರ್ ಅವರ ನಿರಂತರ ಗೈರುಹಾಜರಾತಿ ಮಾತ್ರ ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಪ್ರಮುಖ ವಿಷಯಗಳಲ್ಲಿ ಪಕ್ಷದ ಹೈಕಮಾಂಡ್ನ ನಿಲುವಿಗೆ ಭಿನ್ನವಾಗಿ ಮಾತನಾಡಿರುವ ಅವರ ಹಿಂದಿನ ಹೇಳಿಕೆಗಳು ಈಗ ಮತ್ತೊಮ್ಮೆ ಗಮನಕ್ಕೆ ಬಂದಿದೆ.











