ಭದ್ರಾವತಿ: ಭಕ್ತಿ, ತ್ಯಾಗ ಮತ್ತು ಮಾನವೀಯತೆಯ ಮಹಾ ಸಂಭ್ರಮವಾಗಿ ಭದ್ರಾವತಿ ಪಟ್ಟಣದಲ್ಲಿ ಜನವರಿ 24ರಿಂದ ಫೆಬ್ರವರಿ 1ರವರೆಗೆ ಆಯೋಜನೆಗೊಂಡಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವು ಐದು ಲಕ್ಷಕ್ಕೂ ಅಧಿಕ ಭಕ್ತಾದಿಗಳ ಅಪೂರ್ವ ಸಮಾಗಮದೊಂದಿಗೆ ಭಕ್ತಿಯ ಮಹಾಪರ್ವವಾಗಿ ಅದ್ದೂರಿಯಾಗಿ ಸಂಪನ್ನಗೊಂಡಿತು.

ಉಕ್ಕಿನ ನಗರಿ ಭದ್ರಾವತಿ ಕಳೆದ ಒಂಬತ್ತು ದಿನಗಳ ಕಾಲ ಭಕ್ತಿ, ಜ್ಞಾನ ಹಾಗೂ ಸಂಸ್ಕೃತಿಯ ಮಹಾಸಂಗಮಕ್ಕೆ ಸಾಕ್ಷಿಯಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು, ಸಾಧುಸಂತರು, ಗಣ್ಯರು ಹಾಗೂ ಸಾರ್ವಜನಿಕರ ಸಾನ್ನಿಧ್ಯದಲ್ಲಿ ನಡೆದ ಈ ಮಹೋತ್ಸವಕ್ಕೆ ಭಾನುವಾರ ಭವ್ಯ ಸಮಾರೋಪ ನೆರವೇರಿತು.

ಸಮಾರೋಪದ ಪಾವನ ಕ್ಷಣದಲ್ಲಿ ಸಿರಿಗೆರೆ ಜಗದ್ಗುರುಗಳಾದ ಪೂಜ್ಯ ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮದ್ಯಾಹ್ನ ಸಾಲಂಕೃತ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು, ಸಂಜೆ ಸದ್ದರ್ಮ ಸಿಂಹಾಸನಾರೋಹಣದಲ್ಲಿ ಕುಳಿತು ಭಕ್ತಕೋಟಿಗೆ ದರ್ಶನ ನೀಡಿ ಆಶೀರ್ವಚನ ದಯಪಾಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು,
“ಮಠಕ್ಕೆ ಪೀಠಾಧಿಪತಿಯಾಗುವುದು ದೊಡ್ಡ ವಿಷಯವಲ್ಲ. ಆದರೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರಯೋಧರ ಪತ್ನಿಯಾಗಿರುವುದು ಅತ್ಯಂತ ದೊಡ್ಡ ಗೌರವ. ಯೋಧನ ಪತ್ನಿಯ ತ್ಯಾಗ, ಸಹನೆ ಮತ್ತು ಧೈರ್ಯಕ್ಕೆ ಸಮಾನವಾದುದು ಮತ್ತೊಂದಿಲ್ಲ” ಎಂದು ಭಾವುಕವಾಗಿ ಹೇಳಿದರು.

ಪ್ರತಿ ವರ್ಷ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹತ್ತು ಹುತಾತ್ಮ ವೀರಯೋಧರ ಕುಟುಂಬಗಳಿಗೆ ಸಿರಿಗೆರೆ ತರಳಬಾಳು ಬೃಹನ್ಮಠದಿಂದ ತಲಾ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದ್ದು, ಈ ವರ್ಷವೂ ಅದೇ ಪರಂಪರೆಯನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದರು. “ಹಣದಿಂದ ಯೋಧನ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಅವರ ಕುಟುಂಬಗಳಿಗೆ ನಮ್ಮ ಸಮಾಜದ ಕೃತಜ್ಞತೆಯ ಸಂಕೇತವಾಗಿ ನೆರವು ನೀಡುವುದು ನಮ್ಮ ಕರ್ತವ್ಯ” ಎಂದರು.

ವೇದಿಕೆಯ ಮೇಲೆ ಹುತಾತ್ಮ ಯೋಧರ ಕುಟುಂಬಗಳಿಗೆ ಶಾಲು ಹೊದಿಸಿ ಗೌರವ ಸಲ್ಲಿಸುವ ಸಂದರ್ಭದಲ್ಲಿ ಅಲ್ಲಿದ್ದ ಗಣ್ಯರ ಕಣ್ಣುಗಳು ತೇವವಾಯಿತು. ಹತ್ತಾರು ಸಾವಿರ ಜನರ ಸಮ್ಮುಖದಲ್ಲಿ ನಡೆದ ಆ ಕ್ಷಣ ಭಾವನಾತ್ಮಕವಾಗಿ ಎಲ್ಲರ ಮನಸ್ಸನ್ನು ತಟ್ಟಿತು.

ಸಭಾಂಗಣದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ತಮ್ಮ ಕೈಯಲ್ಲಿದ್ದ ಮೊಬೈಲ್ ದೀಪಗಳನ್ನು ಬೆಳಗಿಸಿ ಹುತಾತ್ಮ ವೀರರಿಗೆ ಗೌರವ ಸಲ್ಲಿಸಿದ ದೃಶ್ಯ ಅತ್ಯಂತ ಮನೋಜ್ಞವಾಗಿತ್ತು. “ವೀರ ಯೋಧರ ಪತ್ನಿಯರನ್ನು ‘ವಿಧವೆ’ ಎಂದು ಕರೆಯುವುದು ಅವಮಾನಕಾರಿ. ಅವರನ್ನೂ ಶುಭ ಸಮಾರಂಭಗಳಿಗೆ ಆಹ್ವಾನಿಸಿ, ಆಶೀರ್ವಾದ ಪಡೆಯುವ ಪರಂಪರೆ ಬೆಳೆಸಬೇಕು. ನಿಮ್ಮ ಮಕ್ಕಳ ಮದುವೆಗಳಲ್ಲಿ ಅವರನ್ನು ಗೌರವದಿಂದ ಕರೆಸಿ ಮಾನ್ಯತೆ ನೀಡಬೇಕು” ಎಂದು ಶ್ರೀಗಳು ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಿದರು.

ಯೋಧರು ಗಡಿಯಲ್ಲಿ ಎದೆಕೊಟ್ಟು ದೇಶ ಕಾಯುವುದರಿಂದಲೇ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. “ಜೈ ಜವಾನ್ – ಜೈ ಕಿಸಾನ್” ಎಂಬುದು ಕೇವಲ ಘೋಷಣೆಯಾಗಿ ಉಳಿಯದೆ, ಸಂಕಷ್ಟದ ಸಂದರ್ಭಗಳಲ್ಲಿ ರೈತರು ಹಾಗೂ ಸೈನಿಕರ ಕುಟುಂಬಗಳಿಗೆ ನೆರವಾಗುವುದೇ ನಿಜವಾದ ಮಾನವೀಯತೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು, ನಿಂದನಾತ್ಮಕ ಸುದ್ದಿಗಳಿಂದ ಅನೇಕ ಕುಟುಂಬಗಳು ನಾಶವಾಗುತ್ತಿವೆ. ಸರ್ಕಾರವು ಈ ಕೂಡಲೇ ಸಾಮಾಜಿಕ ಜಾಲತಾಣಗಳ ನಿಯಂತ್ರಣಕ್ಕೆ ಕಠಿಣ ಕಾಯ್ದೆಗಳನ್ನು ತರಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ರಾಜಕೀಯ ನಾಯಕರಿಗೆ ಸಂದೇಶ ನೀಡಿದ ಅವರು,
“ಸಿದ್ದೇಶ್ವರ, ಮಲ್ಲಿಕಾರ್ಜುನ ಹಾಗೂ ಬಿ.ಪಿ. ಹರೀಶ್ ಸೇರಿದಂತೆ ಎಲ್ಲಾ ನಾಯಕರು ಪರಸ್ಪರ ಟೀಕೆ, ನಿಂದನೆಗಳನ್ನು ಕೈಬಿಟ್ಟು, ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ನಡೆದುಕೊಳ್ಳಬೇಕು. ವೀರಯೋಧರ ಕುಟುಂಬಗಳಿಗೆ ಗೌರವ ನೀಡುವುದು ರಾಜಕೀಯಕ್ಕಿಂತ ಮೇಲಿನ ವಿಷಯ” ಎಂದು ಸಲಹೆ ನೀಡಿದರು.
ಮುಂದಿನ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಸೊಲ್ಲಾಪುರದಲ್ಲಿ ಆಯೋಜಿಸಲಾಗುವುದು ಎಂದು ಶ್ರೀಗಳು ಘೋಷಿಸಿದರು. ಭಕ್ತಿ, ತ್ಯಾಗ ಮತ್ತು ರಾಷ್ಟ್ರಭಕ್ತಿಯ ಸಂದೇಶವನ್ನು ಹೊತ್ತು ಸಾಗಿದ ಈ ವರ್ಷದ ತರಳಬಾಳು ಹುಣ್ಣಿಮೆ ಮಹೋತ್ಸವವು ಭದ್ರಾವತಿಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ಉಳಿಯಲಿದೆ.











