ಬಾಳೆಹೊನ್ನೂರು: ಮನುಷ್ಯನು ಸದಾ ಸುಖವನ್ನು ಬಯಸುತ್ತಾನೆ. ಆದರೆ ಸುಖದ ಮೂಲವಾದ ಅರಿವು, ಆದರ್ಶ ಮತ್ತು ಸಂಸ್ಕೃತಿಯಿಂದ ದೂರವಾದಾಗ ಜೀವನದಲ್ಲಿ ಅಶಾಂತಿ, ಸಂಕಷ್ಟಗಳು ತಪ್ಪುವುದಿಲ್ಲ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಪೀಠಾಧಿಪತಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಮಂಗಳವಾರ ಪೀಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ನಡೆದ ಹುಣ್ಣಿಮೆ ವಸಂತೋತ್ಸವ ಮತ್ತು ಸುರಗಿ ಸಮಾರಾಧನಾ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಮೂಲ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅಗತ್ಯತೆಯನ್ನು ಬಗ್ಗೆ ಹೇಳಿದರು.

“ಮನುಷ್ಯನಾಗಿ ಬದುಕುವುದು ಸುಲಭ; ಆದರೆ ಮಾನವೀಯತೆಯಿಂದ ನಡೆದುಕೊಳ್ಳುವುದು ಅತ್ಯಂತ ಕಷ್ಟ. ಜಾತಿ-ಮತ ಭ್ರಾಂತಿಯಲ್ಲಿ ಶಾಂತಿ ಎಂದಿಗೂ ಸಿಗದು. ಮೌಲ್ಯಗಳ ಉಳಿವು-ಅಳಿವು ಮಾನವನ ನಡೆ-ನುಡಿಗಳಲ್ಲೇ ಅಡಕವಾಗಿದೆ. ನೀತಿವಂತರು ನಿರಾಶರಾಗದೇ ಧರ್ಮದ ಮಾರ್ಗದಲ್ಲಿ ದೃಢವಾಗಿ ಸಾಗಬೇಕು,” ಎಂದು ಅವರು ಹೇಳಿದರು.
ನೀತಿ ಸಂಹಿತೆಯನ್ನು ಅರಿತವರಿಗೆ ಮನಶ್ಶಾಂತಿ ಸಿಗುತ್ತದೆ. ಜೀವನದಲ್ಲಿ ಎದುರಾಗುವ ಅಡ್ಡಿ-ಆತಂಕಗಳನ್ನು ದಿಟ್ಟತನದಿಂದ ಎದುರಿಸಿ, ಶುದ್ಧ ಮನಸ್ಸಿನಿಂದ ಮುನ್ನಡೆಯುವವರಿಗೆ ಶ್ರೇಯಸ್ಸು ನಿಶ್ಚಿತ ಎಂದು ಜಗದ್ಗುರುಗಳು ಅಭಿಪ್ರಾಯಪಟ್ಟರು. “ಮನಸ್ಸನ್ನು ಏಕಾಗ್ರಗೊಳಿಸುವುದು ಹಾಗೂ ಧರ್ಮವನ್ನು ಕಟ್ಟುವ ಕಾರ್ಯ ಅತ್ಯಂತ ಅಮೋಘ. ಸಮಾಜಘಾತಕ ಶಕ್ತಿಗಳ ಮಾತಿಗೆ ಮರುಳಾಗಬಾರದು. ದೈವ ಸಾನ್ನಿಧ್ಯದಲ್ಲಿ ಭಕ್ತಿ, ಶ್ರದ್ಧೆ ಮತ್ತು ನಿಷ್ಠೆ ಗಟ್ಟಿಯಾದರೆ ಬದುಕು ಉಜ್ವಲಗೊಳ್ಳುತ್ತದೆ,” ಎಂದರು.
ಭದ್ರಾ ತೀರದಲ್ಲಿ ಭಕ್ತಿಭಾವದ ಸಂಭ್ರಮ
ಜಾತ್ರಾ ಮಹೋತ್ಸವದ ಕೊನೆಯ ದಿನದ ಅಂಗವಾಗಿ ಹುಣ್ಣಿಮೆ ವಸಂತೋತ್ಸವ ಭಕ್ತಿಪೂರ್ಣವಾಗಿ ಆಚರಿಸಲಾಯಿತು. ಬಳಿಕ ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಇಷ್ಟಲಿಂಗ ಮಹಾಪೂಜೆಯನ್ನು ಜಗದ್ಗುರುಗಳು ನೆರವೇರಿಸಿ ಭಕ್ತರಿಗೆ ಆಶೀರ್ವಾದ ನೀಡಿದರು. ಸಹಸ್ರಾರು ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಧನ್ಯತೆ ಪಡೆದರು.
ಎಡೆಯೂರು, ಸಿದ್ದರಬೆಟ್ಟ, ಮಳಲಿ, ಚಿಮ್ಮಲಗಿ, ಸುಳ್ಯ, ಸಗರ, ಮೈಸೂರು, ತೆಂಡೇಕೆರೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ 25ಕ್ಕೂ ಹೆಚ್ಚು ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧಾರ್ಮಿಕ ಶೋಭೆಯನ್ನು ಹೆಚ್ಚಿಸಿದರು.

ಸುರಗಿ ಸಮಾರಾಧನಾ ಅಂಗವಾಗಿ ಭದ್ರಾ ನದಿಯಲ್ಲಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶಿವಾಚಾರ್ಯರ ಸಮೂಹ ಮಂಗಳ ಸ್ನಾನವೂ ಜರುಗಿತು.
ಏಕಕಾಲದಲ್ಲಿ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅಬ್ಬಿಗೇರಿ ಹಿರೇಮಠದ ಭಕ್ತರಿಂದ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಯುಗಮಾನೋತ್ಸವದ ಈ ಭವ್ಯ ಕಾರ್ಯಕ್ರಮ ಧಾರ್ಮಿಕ ಶ್ರದ್ಧೆ, ಸಂಸ್ಕೃತಿ ಸಂರಕ್ಷಣೆ ಮತ್ತು ಮೌಲ್ಯಾಧಾರಿತ ಜೀವನದ ಸಂದೇಶವನ್ನು ಮತ್ತೊಮ್ಮೆ ಸಾರಿತು.











