ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಆಧ್ಯಾತ್ಮಿಕ ಉನ್ನತಿಯ ಸಂಕೇತ: ಸ್ವಾಮಿಗಳ ಹೆಸರಿನ ಮುಂದಿನ ‘108’ ಮತ್ತು ‘1008’ರ ರಹಸ್ಯ

On: April 25, 2026 12:56 PM
Follow Us:

ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಹಾಗೂ ಲಿಂಗಾಯತ ಸಂಪ್ರದಾಯದಲ್ಲಿ ಸ್ವಾಮೀಜಿಗಳು ಅಥವಾ ಜಗದ್ಗುರುಗಳ ಹೆಸರಿನ ಮುಂದೆ ‘108’ ಮತ್ತು ‘1008’ ಎಂಬ ಸಂಖ್ಯೆಗಳನ್ನು ಬಳಸುವುದು ಅತ್ಯಂತ ಪುರಾತನ ಹಾಗೂ ಅರ್ಥಪೂರ್ಣ ಪದ್ಧತಿಯಾಗಿದೆ. ಈ ಸಂಖ್ಯೆಗಳು ಕೇವಲ ಅಂಕಿಗಳಲ್ಲ; ಬದಲಿಗೆ ಒಬ್ಬ ವ್ಯಕ್ತಿಯು ತಲುಪಿರುವ ಆಧ್ಯಾತ್ಮಿಕ ಎತ್ತರ, ಅವರು ಹೊಂದಿರುವ ಜ್ಞಾನದ ವಿಸ್ತಾರ ಮತ್ತು ಸಮಾಜದಲ್ಲಿ ಅವರ ನಾಯಕತ್ವದ ಸಂಕೇತಗಳಾಗಿವೆ.

ಧಾರ್ಮಿಕ ಪಠ್ಯಗಳ ಪ್ರಕಾರ, ಇವುಗಳನ್ನು ಬಿರುದುಗಳಾಗಿ ಬಳಸಲಾಗುತ್ತದೆ. 108 ಸಂಖ್ಯೆಯನ್ನು ‘ಅಷ್ಟೋತ್ತರ ಶತ’ ಎನ್ನಲಾಗುತ್ತದೆಯಲ್ಲದೆ, ಸಾಮಾನ್ಯವಾಗಿ ವಿರಕ್ತ ಮಠಗಳ ಸ್ವಾಮಿಗಳಿಗೆ ಅಥವಾ ಪಟ್ಟಾಧ್ಯಕ್ಷರಿಗೆ ಬಳಸಲಾಗುತ್ತದೆ. ಅದೇ ರೀತಿ, 1008 ಸಂಖ್ಯೆಯನ್ನು ‘ಅಷ್ಟೋತ್ತರ ಸಹಸ್ರ’ ಎಂದು ಕರೆಯಲಾಗುತ್ತಿದ್ದು, ಇದು ಪಂಚಪೀಠಗಳ ಜಗದ್ಗುರುಗಳಿಗೆ ಅಥವಾ ಅತ್ಯುನ್ನತ ಧಾರ್ಮಿಕ ಸ್ಥಾನದಲ್ಲಿರುವವರಿಗೆ ನೀಡುವ ಗೌರವ ಸೂಚಕವಾಗಿದೆ.

ಹಿಂದೂ ಮತ್ತು ಲಿಂಗಾಯತ ಧರ್ಮಶಾಸ್ತ್ರಗಳಲ್ಲಿ 108 ಎಂಬ ಸಂಖ್ಯೆಗೆ ವಿಶೇಷ ಪಾವಿತ್ರ್ಯ ಹಾಗೂ ವೈಜ್ಞಾನಿಕ ಹಿನ್ನೆಲೆ ಇದೆ. ಖಗೋಳ ವಿಜ್ಞಾನದ ಪ್ರಕಾರ, ಸೂರ್ಯನ ವ್ಯಾಸವು ಭೂಮಿಯ ವ್ಯಾಸಕ್ಕಿಂತ 108 ಪಟ್ಟು ದೊಡ್ಡದಾಗಿದೆ ಮತ್ತು ಸೂರ್ಯ-ಭೂಮಿಯ ನಡುವಿನ ಅಂತರವು ಸೂರ್ಯನ ವ್ಯಾಸದ 108 ಪಟ್ಟು ಇದೆ. ಆಧ್ಯಾತ್ಮಿಕ ಗುರುಗಳು ಸೂರ್ಯನಂತೆ ಜ್ಞಾನದ ಬೆಳಕನ್ನು ನೀಡುವವರು ಎಂಬ ಭಾವನೆ ಇಲ್ಲಿ ಅಡಗಿದೆ. ಯಾವುದೇ ಮಂತ್ರ ಸಿದ್ಧಿಸಿಕೊಳ್ಳಲು ಅಥವಾ ರುದ್ರಾಕ್ಷಿ ಮಾಲೆಯಲ್ಲಿ ಜಪಿಸಲು 108 ಎಂಬ ಸಂಖ್ಯೆಯೇ ಆಧಾರ. ಇದು ಅರಿಷಡ್ವರ್ಗಗಳನ್ನು ಗೆದ್ದ ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟ ಆದರ್ಶ ಯತಿಯ ಲಕ್ಷಣವನ್ನು ಪ್ರತಿನಿಧಿಸುತ್ತದೆ. ಸಂಖ್ಯಾಶಾಸ್ತ್ರದ ದೃಷ್ಟಿಯಿಂದಲೂ 108ರ ಮೊತ್ತ ಒಂಬತ್ತು (1+0+8=9) ಆಗಿದ್ದು, ಒಂಬತ್ತು ಪೂರ್ಣತ್ವದ ಸಂಕೇತವಾಗಿದೆ.

ಜ್ಞಾನಿಯು ಎಷ್ಟೇ ಹಂಚಿದರೂ ಅವನ ಜ್ಞಾನ ಕುಂದದು, ಅವನು ಸದಾ ಪೂರ್ಣನಾಗಿಯೇ ಇರುತ್ತಾನೆ ಎಂಬುದು ಇದರ ತಾತ್ಪರ್ಯ. ಇನ್ನು ‘1008’ ಎಂಬ ಸಂಖ್ಯೆಯು ಅತ್ಯುನ್ನತ ಗೌರವದ ಶಿಖರವಾಗಿದೆ. ಯೋಗಶಾಸ್ತ್ರದ ಪ್ರಕಾರ, ಮನುಷ್ಯನ ತಲೆಯ ಮೇಲ್ಭಾಗದಲ್ಲಿರುವ ‘ಸಹಸ್ರಾರು ಚಕ್ರ’ವನ್ನು ತಪಸ್ಸಿನ ಮೂಲಕ ಜಾಗೃತಗೊಳಿಸಿ, ಪರಶಿವನ ಸಾಕ್ಷಾತ್ಕಾರ ಪಡೆದವರನ್ನು ಗುರುತಿಸಲು ಈ ಸಂಖ್ಯೆಯನ್ನು ಬಳಸಲಾಗುತ್ತದೆ. ಇದು ಒಬ್ಬ ವ್ಯಕ್ತಿಯು ಕೇವಲ ವೈಯಕ್ತಿಕ ಮುಕ್ತಿಯನ್ನಷ್ಟೇ ಪಡೆಯದೆ, ಸಾವಿರಾರು ಜನರಿಗೆ ದಾರಿದೀಪವಾಗುವ ಶಕ್ತಿಯನ್ನು ಹೊಂದಿದ್ದಾನೆ ಎಂಬುದನ್ನು ತೋರಿಸುತ್ತದೆ. ಲಿಂಗಾಯತ ಪಂಚಪೀಠಗಳಾದ ಕಾಶಿ, ರಾಮೇಶ್ವರ, ಉಜ್ಜಯಿನಿ, ಶ್ರೀಶೈಲ ಮತ್ತು ಬಾಳೆಹೊನ್ನೂರು ಪೀಠದ ಜಗದ್ಗುರುಗಳಿಗೆ ಈ ಬಿರುದನ್ನು ಅನ್ವಯಿಸಲಾಗುತ್ತದೆ.

ಅವರು ಧರ್ಮದ ರಕ್ಷಕರು ಮತ್ತು ಲಕ್ಷಾಂತರ ಭಕ್ತರ ಆರಾಧ್ಯ ದೈವಗಳು ಎಂಬ ಗೌರವ ಇದರಲ್ಲಿದೆ.
ಸಾಮಾನ್ಯವಾಗಿ ಆಮಂತ್ರಣಗಳಲ್ಲಿ ‘ಶ್ರೀ ಶ್ರೀ ಶ್ರೀ 1008 ಜಗದ್ಗುರು’ ಎಂದು ಬರೆಯುವುದು ರೂಢಿ. ಇಲ್ಲಿ ಮೂರು ಬಾರಿ ‘ಶ್ರೀ’ ಬಳಸುವುದು ಲಕ್ಷ್ಮಿ (ಸಂಪತ್ತು), ಸರಸ್ವತಿ (ಜ್ಞಾನ) ಮತ್ತು ಪಾರ್ವತಿ (ಶಕ್ತಿ) ಎಂಬ ಮೂರೂ ಅಂಶಗಳು ಅವರಲ್ಲಿವೆ ಅಥವಾ ಅವರು ಲೌಕಿಕ ಆಶೆಗಳನ್ನು ಮೀರಿದವರು ಎಂಬ ಅರ್ಥವನ್ನು ನೀಡುತ್ತದೆ. ಬಸವಣ್ಣನವರ ತತ್ವದಂತೆ ‘ನಡೆ-ನುಡಿ’ ಒಂದಾದವರು ನಿಜವಾದ ಜ್ಞಾನಿಗಳು. ಒಟ್ಟಾರೆಯಾಗಿ, ಸ್ವಾಮಿಗಳ ಹೆಸರಿನ ಮುಂದಿನ ಈ ಸಂಖ್ಯೆಗಳು ಅವರ ವೈರಾಗ್ಯ, ಜ್ಞಾನ, ತಪಸ್ಸು ಮತ್ತು ಸಮಾಜಕ್ಕೆ ಅವರು ನೀಡುವ ಮಾರ್ಗದರ್ಶನಕ್ಕೆ ಸಲ್ಲಿಸುವ ಪರಮೋಚ್ಚ ಗೌರವವಾಗಿದೆ. ಇದು ಆ ವ್ಯಕ್ತಿಯು ಲೌಕಿಕ ಪ್ರಪಂಚದ ತುರ್ತುಗಳಿಗಿಂತ ಭಿನ್ನವಾಗಿ, ಉನ್ನತವಾದ ಆಧ್ಯಾತ್ಮಿಕ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಜಗತ್ತಿಗೆ ಸಾರುವ ಒಂದು ದಿವ್ಯ ಸಂಕೇತವಾಗಿದೆ.

ಲೇಖನ: ಶ್ರೀ ವಿಶ್ವೇಶ್ವರ ಭಟ್, ಸಂಪಾದಕರು, ವಿಶ್ವವಾಣಿ ಪತ್ರಿಕೆ,

K.M.Sathish Gowda

Join WhatsApp

Join Now

Facebook

Join Now

Leave a Comment