ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಭಕ್ತರ ಹೃದಯ ಸಿಂಹಾಸನಾಧೀಶ್ವರ, ಕಾಯಕ ಯೋಗಿಯ 111ನೇ ಜನ್ಮೋತ್ಸವ: ಸಿರಿಗೆರೆಯ ಸಿರಿ, ಸಮಾನತೆಯ ಹರಿಕಾರರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳು

On: April 28, 2026 8:32 PM
Follow Us:

ಕರ್ನಾಟಕದ ಧಾರ್ಮಿಕ ಮತ್ತು ಸಾಮಾಜಿಕ ಇತಿಹಾಸದಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರು ಪೀಠಕ್ಕೆ ವಿಶಿಷ್ಟ ಸ್ಥಾನವಿದೆ. ಈ ಪೀಠದ ಪರಂಪರೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು, ‘ದುಗ್ಗಾಣಿ ಮಠ’ವನ್ನು ‘ದುಡಿಯುವ ಮಠ’ವನ್ನಾಗಿ ಪರಿವರ್ತಿಸಿದ ಯುಗಪುರುಷ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು. ಏಪ್ರಿಲ್ 28, 1914ರ ಬಸವ ಜಯಂತಿಯಂದು ಜನಿಸಿದ ಶ್ರೀಗಳು, ಅಪ್ಪಟ ಬಸವ ತತ್ವದ ಹರಿಕಾರರಾಗಿ ಬಾಳಿ ಬೆಳಗಿದವರು. ಇಂದು ಅವರ 111ನೇ ಜನ್ಮ ವರ್ಧಂತಿಯ ಪವಿತ್ರ ಸ್ಮರಣೆ.

1940ರ ಬಸವ ಜಯಂತಿಯಂದೇ ಪೀಠಾರೋಹಣ ಮಾಡಿದ ಶ್ರೀಗಳು, ಅಂದು ಮಠ ಎದುರಿಸುತ್ತಿದ್ದ ಆರ್ಥಿಕ ಮುಗ್ಗಟ್ಟು ಮತ್ತು ಸಾಮಾಜಿಕ ಅಸಂಘಟನೆಯನ್ನು ಕಂಡು ಎದೆಗುಂದಲಿಲ್ಲ. “ಕಾಯ, ಕಾಲ ಮತ್ತು ಕಾಸಿಗೆ ಮಹತ್ವ ನೀಡದವನು ಉದ್ಧಾರವಾಗಲಾರ” ಎಂಬ ಮಂತ್ರವನ್ನು ಸ್ವತಃ ಪಾಲಿಸಿ ತೋರಿಸಿದರು. ಅಂದು ಜನಸಾಮಾನ್ಯರಿಗೆ ಮಠದ ಬಗೆಗಿದ್ದ ಅಸಡ್ಡೆಯನ್ನು ಹೋಗಲಾಡಿಸಿ, ಭಕ್ತರಲ್ಲಿ “ಮಠ ನಮಗೇನು ಮಾಡಿದೆ ಎನ್ನುವುದಕ್ಕಿಂತ, ಮಠಕ್ಕೆ ನಾವೇನು ಮಾಡಿದೆವು?” ಎಂಬ ಸಮರ್ಪಣಾ ಭಾವ ಮೂಡಿಸುವಲ್ಲಿ ಯಶಸ್ವಿಯಾದರು. ಅವರ ಕಾಯಕ ಶ್ರದ್ಧೆ ಮತ್ತು ನೇರನಿಷ್ಟುರ ನುಡಿಗಳೇ ಸಿರಿಗೆರೆ ಮಠವನ್ನು ಇಂದಿನ ಬೃಹತ್ ಮಟ್ಟಕ್ಕೆ ಬೆಳೆಸುವಲ್ಲಿ ಅಡಿಪಾಯವಾದವು.

ಭಾರತಕ್ಕೆ ಸಂವಿಧಾನ ಜಾರಿಯಾಗುವ ಮೊದಲೇ, ಸಾಮಾಜಿಕ ಸಮಾನತೆಯ ಕನಸು ಕಂಡು ಅದನ್ನು ನನಸಾಗಿಸಿದವರು ಶ್ರೀಗಳು. “ಮಾನವ ಜಾತಿ ತಾನೊಂದೆ ವಲಂ” ಎಂಬ ಪಂಪನ ವಾಣಿಯಂತೆ, ಜಾತಿ ಪದ್ಧತಿಯ ವಿಷಮತೆಯ ನಡುವೆಯೂ ಸಹಪಂಕ್ತಿ ಭೋಜನ ಆರಂಭಿಸಿದ ಧೀರ ಚೇತನ ಇವರು. “ಸಹಪಂಕ್ತಿ ಭೋಜನ ಬೇಡವೆಂದರೆ ನನಗೆ ಜಗದ್ಗುರು ಪಟ್ಟವೇ ಬೇಡ” ಎಂದು ಘೋಷಿಸಿದ ಅವರ ಮಾನವತಾವಾದ ಅಪ್ರತಿಮವಾದುದು. ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ‘ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ’ಯನ್ನು ಸ್ಥಾಪಿಸಿ, ಸಾವಿರಾರು ಗ್ರಾಮೀಣ ಪ್ರತಿಭೆಗಳಿಗೆ ಜ್ಞಾನದ ದೀವಿಗೆಯಾದರು.

ವಚನ ಸಾಹಿತ್ಯದ ಪಿತಾಮಹ ಫ.ಗು. ಹಳಕಟ್ಟಿಯವರ ಬಗೆಗಿನ ಒಂದು ಪ್ರಸಂಗ ಇಂದಿಗೂ ರೋಮಾಂಚನಕಾರಿ. ಸಾಲದ ಬಾಧೆಯಿಂದ ಹಳಕಟ್ಟಿಯವರ ಮನೆ ಜಪ್ತಿಗೆ ಬಂದಾಗ, ಶ್ರೀಗಳು ಮಠದ ಬಂಗಾರದ ಪದಕವನ್ನು ನೀಡಿ, “ಇದನ್ನು ಮಾರಿ ಋಣಮುಕ್ತರಾಗಿ, ಶರಣ ಸಾಹಿತ್ಯದ ಸೇವಕರು ಸಾಲಗಾರರಾಗಿ ನೋವುಣ್ಣುವುದು ನಮಗೆ ಇಷ್ಟವಿಲ್ಲ” ಎಂದು ಹರಸಿದ್ದರು. ಇದು ಕೇವಲ ದಾನವಲ್ಲ, ಸಾಹಿತ್ಯ ಮತ್ತು ಸಾಹಿತಿಗಳ ಮೇಲಿದ್ದ ಅವರ ಅಪಾರ ಗೌರವಕ್ಕೆ ಸಾಕ್ಷಿ.

ಕಾವಿಧಾರಿಗಳೆಂದರೆ ಸಂಪ್ರದಾಯವಾದಿಗಳು ಎಂಬ ನಂಬಿಕೆಯನ್ನು ಸುಳ್ಳು ಮಾಡಿದವರು ಶ್ರೀಗಳು. ಜಪ-ತಪಗಳಿಗಿಂತ ಜನಸೇವೆಯೇ ಮುಖ್ಯವೆಂದು ನಂಬಿದ್ದ ಅವರು, ಮೂಢನಂಬಿಕೆಗಳ ವಿರುದ್ಧ ಪ್ರಖರ ಧ್ವನಿ ಎತ್ತಿದರು. ರೈತರಿಗೆ ಕೃಷಿ ಜ್ಞಾನ, ಯುವಕರಿಗೆ ಕಾಯಕ ನಿಷ್ಠೆ ಮತ್ತು ಸಮಾಜಕ್ಕೆ ಶರಣ ತತ್ವವನ್ನು ಬೋಧಿಸುತ್ತಾ, ಮೌಢ್ಯತೆಯ ಕತ್ತಲನ್ನು ಓಡಿಸಿದರು. ಅನ್ಯ ಭಾಷೆಗಳಿಗೂ ವಚನಗಳನ್ನು ಭಾಷಾಂತರಿಸುವ ಮೂಲಕ ವಿಶ್ವಗುರು ಬಸವಣ್ಣನವರ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದರು.

1992ರ ಸೆಪ್ಟೆಂಬರ್ 24ರಂದು ಲಿಂಗೈಕ್ಯರಾದ ಶ್ರೀಗಳು ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ವ್ಯಕ್ತಿತ್ವ ‘ಜಂಗಮ’ವಾಗಿ ಸದಾ ಚಲನಶೀಲವಾಗಿದೆ. ಇಂದು ಅವರ ಉತ್ತರಾಧಿಕಾರಿಗಳಾದ ಪರಮಪೂಜ್ಯ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಹಿರಿಯ ಗುರುಗಳ ಆಶಯದಂತೆ ಮಠವನ್ನು ತಾಂತ್ರಿಕವಾಗಿ ಮತ್ತು ಸಾಮಾಜಿಕವಾಗಿ ಜಗತ್ತಿನ ಭೂಪಟದಲ್ಲಿ ಉನ್ನತ ಸ್ಥಾನಕ್ಕೇರಿಸಿದ್ದಾರೆ.

“ನೆತ್ತಿಯುಳ್ಳವನು ಓದಬೇಕು, ರಟ್ಟೆಯುಳ್ಳವನು ದುಡಿಯಬೇಕು” ಎಂದು ಸಾರಿದ ಆ ಮಹಾಚೇತನಕ್ಕೆ ಕೋಟಿ ನಮನಗಳು. ಭಕ್ತರ ಹೃದಯದಲ್ಲಿ ಹಣತೆ ಹಚ್ಚಿ, ಅಜ್ಞಾನದ ಕತ್ತಲೆ ಓಡಿಸಿದ ಶಿವಕುಮಾರ ಶ್ರೀಗಳ ಸ್ಮರಣೆಯೇ ನಮಗೆ ಎಂದೆಂದಿಗೂ ಸ್ಫೂರ್ತಿ. ಅವರ 111ನೇ ಜನ್ಮ ವರ್ಧಂತಿಯು ಸಮಾಜದಲ್ಲಿ ಸೌಹಾರ್ದತೆ ಮತ್ತು ಕಾಯಕ ನಿಷ್ಠೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿ.

K.M.Sathish Gowda

Join WhatsApp

Join Now

Facebook

Join Now

Leave a Comment