ಬೆಂಗಳೂರು, ಡಿ. 7: ಮುಂಬರುವ ಐಪಿಎಲ್ (2026) ಪಂದ್ಯಗಳನ್ನು ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ಭೀಕರ ಕಾಲ್ತುಳಿತದ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣದ ಸುರಕ್ಷತೆಯ ಕುರಿತ ಆತಂಕಗಳು ಉಲ್ಬಣಗೊಂಡಿದ್ದರೂ, ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ ಎಂದು ಅವರು ಭರವಸೆ ನೀಡಿದ್ದಾರೆ.
ಜೂನ್ 4ರಂದು ಕ್ರೀಡಾಂಗಣದ ಸಮೀಪ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟ ಬಳಿಕ, ಚಿನ್ನಸ್ವಾಮಿಯಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳು ಎತ್ತಂಗಡಿಯಾಗುವ ಸಾಧ್ಯತೆ ಇದ್ದವು. ಮಹಿಳಾ ಏಕದಿನ ವಿಶ್ವಕಪ್ ಮತ್ತು ಮುಂದಿನ ಪುರುಷರ ಟಿ–20 ವಿಶ್ವಕಪ್ ಪಂದ್ಯಗಳ ಆತಿಥ್ಯವೂ ಬೆಂಗಳೂರಿನ ಕೈ ತಪ್ಪಿತ್ತು. ಇದೇ ಹಿನ್ನೆಲೆಯಲ್ಲಿ, 2026ರ ಐಪಿಎಲ್ ಪಂದ್ಯಗಳನ್ನೂ ಬೇರೆ ನಗರಕ್ಕೆ ಸ್ಥಳಾಂತರಿಸುವ ಸಾಧ್ಯತೆಗಳ ಕುರಿತು ವರದಿಗಳು ಹೊರಬಿದ್ದಿದ್ದವು.
ಸುರಕ್ಷತಾ ವಿಚಾರದಲ್ಲಿ ಯಾವುದೇ ತಳಮಳವಿಲ್ಲದಂತೆ, ರಾಜ್ಯ ಸರ್ಕಾರವು ಕ್ರೀಡಾಂಗಣದ ಸಂಪೂರ್ಣ ರಚನಾತ್ಮಕ ಫಿಟ್ನೆಸ್ ವರದಿಯನ್ನು ಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಲೋಕೋಪಯೋಗಿ ಇಲಾಖೆ (PWD) ಕೆಎಸ್ಸಿಎಗೆ ನೋಟಿಸ್ ಜಾರಿ ಮಾಡಿ, ರಚನಾತ್ಮಕ ಸುರಕ್ಷತಾ ವರದಿ ಸಲ್ಲಿಸಲು ಸೂಚನೆ ನೀಡಿದೆ.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಹೇಳುವುದೇನಂದರೆ,
“ಚಿನ್ನಸ್ವಾಮಿ ಕರ್ನಾಟಕ ಮತ್ತು ಬೆಂಗಳೂರಿನ ಹೆಮ್ಮೆ. ಯಾವುದೇ ಐಪಿಎಲ್ ಪಂದ್ಯ ಸ್ಥಳಾಂತರವಾಗುವುದಿಲ್ಲ. ಪಂದ್ಯಗಳನ್ನು ಇಲ್ಲಿಯೇ ನಡೆಸುತ್ತೇವೆ. ಜನಸಂದಣಿ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಮತ್ತು ಕಾನೂನುಬದ್ಧವಾಗಿ ಎಲ್ಲವನ್ನೂ ನಡಿಸುತ್ತೇವೆ” ಎಂದು ಹೇಳಿದರು.
ಇದೇ ಸಂದರ್ಭ, ಬೆಂಗಳೂರಿನಲ್ಲಿ ಪರ್ಯಾಯವಾಗಿ ದೊಡ್ಡ ಕ್ರೀಡಾಂಗಣ ನಿರ್ಮಿಸುವ ಸರ್ಕಾರದ ಯೋಜನೆಯನ್ನೂ ಅವರು ಬಹಿರಂಗಪಡಿಸಿದರು. ಭವಿಷ್ಯದಲ್ಲಿ ಇದೇ ರೀತಿಯ ಅನಾಹುತಗಳನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು.











